Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಚುನಾವಣಾ ರಾಜಕೀಯಕ್ಕೆ ಶಾಸಕ ಹಾಲಾಡಿ ನಿವೃತ್ತಿ ಘೋಷಣೆ

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 24 ವರ್ಷಗಳಿಂದ ಶಾಸಕರಾಗಿ, ಅಭಿಮಾನಿಗಳಗೆ ‘ಕುಂದಾಪುರದ ವಾಜಪೇಯಿ’ ಎಂದೆನಿಸಿಕೊಂಡಿರುವ ಹಾಲಾಡಿ ಅವರ ಈ ನಡೆಯಿಂದಾಗಿ, ಸದ್ಯ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಕುತೂಹಲ ಮೂಡಿದೆ.

ವಿಧಾನಸಭಾ ಚುನಾವಣೆಗೆ ಪುರ್ವಭಾವಿಯಾಗಿ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ವತಃ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಈ ಇಚ್ಛೆ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದ ಇದನ್ನು ಸ್ವತಃ ಶಾಸಕರ ಆಪ್ತರು ದೃಢೀಕರಿಸಿದ್ದಾರೆ. ಎ.ಜಿ. ಕೊಡ್ಗಿ ಅವರ ಪುತ್ರ ಹಾಗೂ ತಮ್ಮ ಆಪ್ತ ಕಿರಣ ಕೊಡ್ಗಿ ಅವರಿಗೆ ಕುಂದಾಪುರದ ಟಿಕೆಟ್ ನೀಡುವಂತೆ ಬೇಡಿಕೆ ಇರಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಈ ಭಾರಿ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ನೀಡುತ್ತಾ – ಇಲ್ಲವೇ ಎಂಬ ಚರ್ಚೆಯ ಬೆನ್ನಲೇ ಸ್ವತಃ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿರುವ ಅವರು ಸದ್ಯ ಜಾಣ ನಡೆಯಿರಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

ಹಾಲಾಡಿ ಎಂಬ ಗೆಲುವಿನ ಸರದಾರ:
1999ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಮೊದಲ ಚುನಾವಣೆಯಲ್ಲೇ 1 ಸಾವಿರ ಮತಗಳಿಂದ ಪ್ರತಾಪಚಂದ್ರ ಶೆಟ್ಟಿಯವರನ್ನು ಸೋಲಿಸಿದ್ದರು. 2004ರಲ್ಲಿ ಗೆಲುವಿನ ಅಂತರವನ್ನು 20 ಸಾವಿರಕ್ಕೆ ವಿಸ್ತರಿಸಿಕೊಂಡರು. 2008ರಲ್ಲಿ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದ ಪ್ರಭಾವಿ ರಾಜಕಾರಣ ಕೆ. ಜಯಪ್ರಕಾಶ್ ಹೆಗ್ಡೆಯನ್ನೇ 25 ಸಾವಿರ ಮತಗಳಿಂದ ಮಣಿಸಿದ್ದರು.

ಹೀಗೆ ಮೂರು ಬಾರಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ 2012ರಲ್ಲಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಇದರಿಂದ ಬೇಸರಗೊಂಡ ಹಾಲಾಡಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನೇ ತೊರೆದಿದ್ದರು. ಮುಂದೆ 2013ರ ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಕಣಕ್ಕಿಳಿದು 89 ಸಾವಿರ ಮತಗಳನ್ನು ಪಡೆದು 40 ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದು ಹಾಲಾಡಿ ವೈಯಕ್ತಿಕ ವರ್ಚಸ್ಸಿಗೆ ಕನ್ನಡಿ ಹಿಡಿದಂತಿತ್ತು.

ಇದಾದ ಬಳಿಕ 2018ರ ಚುನಾವಣೆ ವೇಳೆಗೆ ಮರಳಿ ಬಿಜೆಪಿಗೆ ಬಂದಿದ್ದ ಹಾಲಾಡಿ ಮತ್ತೆ ಇಲ್ಲಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್’ನ ರಾಕೇಶ್ ಮಲ್ಲಿ 56,405 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. /ಕುಂದಾಪ್ರ ಡಾಟ್ ಕಾಂ ವರದಿ/

ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ?
ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಲ್ಲದೇ ಬಿಜೆಪಿ ಇಲ್ಲ ಎಂಬ ವಾತಾವರಣ ಸದ್ಯಕ್ಕಿದೆ. ಈ ನಡುವೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವುದರಿಂದ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಸದ್ಯದ ಕುತೂಹಲ. ಹಾಲಾಡಿ ಅವರೇ ಸೂಚಿಸಿದ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್ ನೀಡಲಿದೆಯಾ ಅಥವಾ ಬೇರೆ ಅಭ್ಯರ್ಥಿಗೆ ಮಣೆ ಹಾಕಲಿದೆಯೇ ಕಾದು ನೋಡಬೇಕಿದೆ.

ಇನ್ನು ಕುಂದಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೂ ರೇಸಿನಲ್ಲಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ಜನಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುವುದು ಹೆಗ್ಡೆ ಅವರ ಪ್ಲಸ್ ಪಾಯಿಂಟ್. ಇನ್ನು 2013ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಬಿ. ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ದೊರೆತರೂ ಅಚ್ಚರಿಯಿಲ್ಲ. ಒಂದು ಹಂತದಲ್ಲಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಕಿಶೋರ್ ಕುಮಾರ್ ಅವರನ್ನು ಬಿಜೆಪಿ ಮತ್ತೆ ಗುರುತಿಸಿ ಹುದ್ದೆಗಳನ್ನು ನೀಡುತ್ತಲೇ ಬಂದಿದೆ. /ಕುಂದಾಪ್ರ ಡಾಟ್ ಕಾಂ ವರದಿ/

Exit mobile version