Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಾಬು ಶೆಟ್ಟಿಗೆ ಟಿಕೆಟ್ ದೊರೆಯುವ ಸಾಧ್ಯತೆ? – ಮನೆಮುಂದೆ ಜಮಾಯಿಸಿದ ಕಾರ್ಯಕರ್ತರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬೈಂದೂರು ಬಿಜೆಪಿ ಪಕ್ಷದ ಎಂಎಲ್‌ಎ ಟಿಕೆಟ್ ಅಕಾಂಕ್ಷಿ ಆಗಿರುವ ಹಿರಿಯ ಮುಖಂಡ ಕೆ. ಬಾಬು ಶೆಟ್ಟಿ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡಿದ್ದು, ಮಂಗಳವಾರ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಬೆಂಬಲ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಬೆಳಿಗ್ಗೆಯೇ ಅವರ ಮನೆಯ ಮುಂದೆ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಟಿಕೆಟ್ ಆಕಾಂಕ್ಷಿ ಕೆ. ಬಾಬು ಶೆಟ್ಟಿ ಅವರು ಮಾತನಾಡಿ, ಪಕ್ಷದಕ್ಕಾಗಿ ಮೂರು ದಶಕಗಳಿಂದ ದುಡಿಯುತ್ತಿರುವ ನಾನು ಟಿಕೆಟ್‌ಗಾಗಿ ಬೇಡಿಕೆ ಇರಿಸಿದ್ದೇನೆ. ಅದಕ್ಕೆ ತಕ್ಕಂತೆ ನಮಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಬರುತ್ತಿದೆ. ಏನೇ ಆದರೂ ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದರು.

ಈ ವೇಳೆ ಉಪಸ್ಥಿತರಿದ್ದ ಹಿರಿಯ ಮುಖಂಡ ಕೆ. ನಾರಾಯಣ ಹೆಗ್ಡೆ, ಸದಾಶಿವ ಪಡುವರಿ, ಮಹೇಂದ್ರ ಪೂಜಾರಿ ನಾವುಂದ, ಪುಪ್ಪರಾಜ್ ಶೆಟ್ಟಿ ಶಿರೂರು, ಪ್ರವೀಣಕುಮಾರ್ ಶೆಟ್ಟಿ ಕಡ್ಕೆ ಮೊದಲಾದವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ, ಬಾಬು ಶೆಟ್ಟಿ ಅವರಿಗೆ ಈ ಭಾರಿ ನ್ಯಾಯಯುತವಾಗಿ ಟಿಕೆಟ್ ದೊರೆಯಬೇಕಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು. ಈ ವೇಳೆ ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು.

Exit mobile version