Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಬಿಜೆಪಿ ಎಂಎಲ್‌ಎ ಟಿಕೆಟ್ ಸಿಗದಿದ್ದಕ್ಕೆ ಬೇಸರವಾಗಿದೆ – ಗೋವಿಂದ ಬಾಬು ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಈ ಭಾರಿ ನನಗೆ ಬಿಜೆಪಿ ಪಕ್ಷ ಬೈಂದೂರು ಎಂಎಲ್‌ಎ ಟಿಕೆಟ್ ನೀಡಬಹುದೆಂಬ ನಿರೀಕ್ಷೆ ಇತ್ತು ಆದರೆ ಅದು ಈಡೇರಿಲ್ಲ. ಪಕ್ಷದ ನಾಯಕರೇ ಕರೆದು ಚುನಾವಣೆಗೆ ತಯಾರಾಗುವಂತೆ ಹೇಳಿ ಈಗ ಟಿಕೆಟ್ ನೀಡದಿರುವುದು ಮನಸ್ಸಿಗೆ ನೋವಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಹೇಳಿದರು.

ಅವರು ಉಪ್ಪಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಕಛೇರಿಯಲ್ಲಿ ಶನಿವಾರ ಕಾರ್ಯಕರ್ತರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು. ಬಿಜೆಪಿ ಪಕ್ಷದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿಕೊಂಡು, ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ. ಕಾರ್ಯಕರ್ತರು ಹಾಗೂ ಹಿತೈಶಿಗಳ ಆಶಯದಂತೆ ನಾನು ಕಳೆದ ಆರು ವರ್ಷಗಳಿಂದ ಪಕ್ಷದಲ್ಲಿ ತೊಡಗಿಸಿಕೊಂಡಿದ್ದೆ. ನನ್ನದೇ ಆದ ನೆಲೆಯಲ್ಲಿಯೂ ಪಕ್ಷ ಸಂಘಟನೆಯನ್ನೂ ಮಾಡಿದ್ದೇನೆ ಎಂದರು.

ಟಿಕೆಟ್ ಘೋಷಣೆಯ ಬಳಿಕ ಕೆಲವರು ಬಂಡಾಯ ಸಭೆಗೆ ನನ್ನನ್ನು ಆಹ್ವಾನಿಸಿದ್ದರೂ ನಾನು ಹೋಗಿಲ್ಲ. ಆದರೆ ಪಕ್ಷದ ಯಾರೊಬ್ಬ ನಾಯಕರೂ ನನ್ನನ್ನು ಸಂಪರ್ಕಿಸಿಲ್ಲ. ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ಮೂರು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದ ಅವರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ಹಲವು ಮಂದಿ ಗೋವಿಂದ ಬಾಬು ಪೂಜಾರಿ ಅವರನ್ನು ಭೇಟಿಯಾಗಿ ನಿಮ್ಮ ಜೊತೆಗಿರುವುದಾಗಿ ತಿಳಿಸಿದ್ದಾರೆ.

Exit mobile version