Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯಲ್ಲಿ ಮರು ಸೇರ್ಪಡೆ ಖಂಡಿಸಿ ಪ್ರತಿಭಟನೆ

ಕುಂದಾಪುರ: ವಂಡ್ಸೆ ಗ್ರಾಮವನ್ನು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಮರು ಸೇರ್ಪಡೆಗೊಳಿಸಿದ್ದನ್ನು ಖಂಡಿಸಿ, ಅ. ೧೩ ರಂದು ವಂಡ್ಸೆಯಲ್ಲಿ ಬೃಹತ್ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು.

ಅವೈಜ್ಞಾನಿಕವಾದ ವರದಿಯಿಂದ ವಂಡ್ಸೆ ಗ್ರಾಮವನ್ನು ತಕ್ಷಣ ಕೈಬಿಡಬೇಕು. ನಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳು ಅಥವಾ ತಹಶೀಲ್ದಾರರು ಸ್ಥಳಕ್ಕೆ ಬಂದು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾ ನಿರತರು ಕೆಲವೊಷ್ಟು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ವಂಡ್ಸೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ.ಸದಸ್ಯ ಹೆಚ್. ಮಂಜಯ್ಯ ಶೆಟ್ಟಿ, ಕಸ್ತೂರಿ ರಂಗನ್ ವರದಿ ಬಗ್ಗೆ ಜನರಲ್ಲಿ ಗೊಂದಲವಿದೆ. ಸ್ಪಷ್ಟ ಮಾಹಿತಿಯನ್ನು ನೀಡುವ ಕೆಲಸ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿಲ್ಲ. ಅವೈಜ್ಞಾನಿಕವಾಗಿ ಪಶ್ಚಿಮಘಟ್ಟಗಳಿಂದ ದೂರವಿರುವ ಗ್ರಾಮಗಳನ್ನು ಮರು ಸೇರ್ಪಡೆಯಾಗಲು ಯಾವ ಬೇಜಬ್ದಾರಿ ಕಾರಣವೋ ಗೊತ್ತಿಲ್ಲ. ಒಟ್ಟಾರೆಯಾಗಿ ಜನರಿಗೆ ತೊಂದರೆ ಆಗಬಾರದು ಎಂದರು.

ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕತೆಯ ಬಗ್ಗೆ ಈಗಾಗಲೇ ರೈತ ಚೈತನ್ಯ ಯಾತ್ರೆಯಲ್ಲಿ ಸಂಸದರ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ವರದಿಯಿಂದ ವಂಡ್ಸೆಯನ್ನು ಕೈ ಬಿಡುವ ಬಗ್ಗೆ ನಮ್ಮ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಒತ್ತಡ ತರಬೇಕಿದೆ ಎಂದರು.

ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಪಶ್ಚಿಮ ಘಟ್ಟದ ಪ್ರದೇಶದಿಂದ ೨೦ ಕಿ.ಮೀ.ದೂರದಲ್ಲಿದ್ದು, ವರದಿಯಲ್ಲಿ ಸೂಚಿಸಿರುವಂತೆ 10.ಕಿ.ಮೀ ಅಂತರ ಮಾತ್ರ ಎನ್ನುವುದು ವ್ಯತಿರಿಕ್ತವಾಗಿದೆ. ಈ ಪ್ರದೇಶ ಸಮುದ್ರ ಪ್ರದೇಶಕ್ಕೆ ಹತ್ತಿರವಾಗಿದ್ದು, ಸಿ.ಆರ್.ಜೆಡ್ ವ್ಯಾಪ್ತಿಗೂ ಒಳಪಡುತ್ತದೆ ದಟ್ಟ ಜನವಸತಿಯನ್ನು ಹೊಂದಿರುವ ವಂಡ್ಸೆಯಲ್ಲಿ ಅರಣ್ಯ ಪ್ರದೇಶ ಬಹಳ ವಿರಳವಾಗಿದ್ದು, ಮತ್ತೆ ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಿದ್ದು ತೀರಾ ಅವೈಜ್ಞಾನಿಕ ಎಂದರು.

ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ನಡೆದ ಪ್ರತಿಭಟನೆಯಲ್ಲಿ ತಹಶೀಲ್ದಾರರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ರೆಂಜರ್ ಮೂಲಕ ಡಿಎಫ್‌ಓಗೂ, ನಾಡ ಕಛೇರಿಯ ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅ.೧೯ರೊಳಗೆ ತಹಶೀಲ್ದಾರ್ ಮತ್ತು ಡಿಎಫ್‌ಓ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಿ, ಅಲ್ಲಿ ಸಮಂಜಸ ಉತ್ತರ ಲಭಿಸದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸುವುದೆಂದು ನಿರ್ಣಯಿಸಲಾಯಿತು.

ಪ್ರತಿಭಟನೆಯಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ವಂಡಬಳ್ಳಿ ಜಯರಾಮ ಶೆಟ್ಟಿ, ವಿ.ಕೆ.ಶಿವರಾಮ ಶೆಟ್ಟಿ, ಸಂಜೀವ ಪೂಜಾರಿ, ಶ್ರೀನಿವಾಸ ಪೂಜಾರಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತ್ಯಾಂಪಣ್ಣ ಶೆಟ್ಟಿ, ಅಬ್ದುಲ್ ಮುತ್ತಾಲಿ ವಂಡ್ಸೆ, ಗ್ರಾ.ಪಂ.ಸದಸ್ಯರಾದ ಉದಯ ನಾಯ್ಕ್, ಗುಂಡು ಪೂಜಾರಿ, ಆಶೀರ್ವಾದ ಫ್ರೆಂಡ್ಸ್‌ನ ವಿಜಯ್, ಶ್ರೀ ಯಕ್ಷೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಮೊಕ್ತೇಸರ ಭಾಸ್ಕರ ಪಾತ್ರಿಗಳು, ಯುವ ಸಂಘಟನೆಯ ದಿನೇಶ ಕಾಂಚನ್, ದಿನೇಶ ಬಿಲ್ಲಾ, ಯುವಶಕ್ತಿ ಮಿತ್ರ ಮಂಡಳಿಯ ಸತೀಶ್ ಚಂದನ್, ಎಚ್.ಎಂ.ಸಿ ಫ್ರೆಂಡ್ಸ್‌ನ ರಫೀಕ್ ಸಾಹೇಬ್, ಫಾರೂಕ್ ಸಾಹೇಬ್, ವಂಡ್ಸೆ ವ್ಯ.ಸೇ.ಸ.ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮಹಾಗಣಪತಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸದಾನಂದ ನಾಯ್ಕ್, ಕಾರ್ಯದರ್ಶಿ ಗಣೇಶ, ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಶ್ರೀಧರ ಶೆಟ್ಟಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಲ್.ಎನ್.ಆಚಾರ್ಯ, ಕಾರ್ಯದರ್ಶಿ ಆತ್ರಾಡಿ ಹರ್ಷವರ್ಧನ ಹೆಗ್ಡೆ, ನಿಯೋಜಿತ ಅಧ್ಯಕ್ಷ ವಿಠಲ ಆಚಾರ್ಯ, ನಿಯೋಜಿತ ಕಾರ್ಯದರ್ಶಿ ಸಂದೇಶ ಶೆಟ್ಟಿ, ಕೊಳ್ತ ಗೋಪಾಲ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ನಾರಾಯಣ ಗಾಣಿಗ, ಜಯಂತಿ ಪಿ.ಶೆಟ್ಟಿ, ನಿರ್ಮಲ ಶೆಟ್ಟಿ, ಗಣೇಶ ನಾಯ್ಕ್, ದಯಾನಂದ ಆಚಾರ್ಯ, ಲಾಲಿ ಸೋಜನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ, ಶ್ರೀ ಯಕ್ಷಿ ಯುವ ಸಂಘಟನೆ, ಯುವಶಕ್ತಿ ಮಿತ್ರ ಮಂಡಳಿ ಶಾರ್ಕೆ, ಎಚ್.ಎಂ.ಸಿ ಫ್ರೆಂಡ್ಸ್, ಚಕ್ರ ಯುವಕ ಮಂಡಲ ವಂಡ್ಸೆ, ಮಹಾಗಣಪತಿ ರಿಕ್ಷಾ ಚಾಲಕ, ಮಾಲಕರ ಸಂಘ ವಂಡ್ಸೆ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Exit mobile version