Kundapra.com ಕುಂದಾಪ್ರ ಡಾಟ್ ಕಾಂ

ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಸ್ತೂರಿ ರಂಗನ್ ವರದಿಯಲ್ಲಿ ಲೋಪ: ಮುಟ್ಲಪಾಡಿ ಸತೀಶ್ ಶೆಟ್ಟಿ

ಕುಂದಾಪುರ: ಕಸ್ತೂರಿರಂಗನ್ ವರದಿಯಲ್ಲಾಗುತ್ತಿರುವ ಲೋಪದ ಬಗ್ಗೆ ರಾಜಕಾರಣಿಗಳನ್ನು ದೂಷಿಸುವ ಮೊದಲು ಈ ವಿಚಾರದಲ್ಲಿ ಅಧಿಕಾರಿಗಳು ಮಾಡುತ್ತಿರುವ ರಾಜಕೀಯವನ್ನು ವಿರೋಧಿಸಬೇಕಿದೆ. ರಾಜ್ಯ ಸರಕಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಪಡೆಯನ್ನೇ ವರದಿ ಸಿದ್ಧಪಡಿಸಲು ಹೇಳಿದ್ದರೂ, ಯಾವೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಬಂದು ಜನರ ಸಮಸ್ಯೆಗಳನ್ನು ಆಲಿಸದೇ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಕಾರ್ಕಳ ತಾಲೂಕು ಅಧ್ಯಕ್ಷ ಮುಟ್ಲಪಾಡಿ ಸತೀಶ್ ಶೆಟ್ಟಿ ಹೇಳಿದರು.

ಜಡ್ಕಲ್ ಪಂಚಾಯತ್ ವಠಾರದಲ್ಲಿ ಕಸ್ತೂರಿರಂಗನ್ ವರದಿಯ ವಿರುದ್ದ ಸುಪ್ರಿಂ ಕೋರ್ಟಿಗೆ ಮೇನ್ಮನವಿ ಸಲ್ಲಿಸುವ ಸಲುವಾಗಿ ಹಮ್ಮಿಕೊಂಡ ಜಡ್ಕಲ್-ಮುದೂರು ಗ್ರಾಮಸ್ಥರ ಸಹಿ ಸಂಗ್ರಹ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲು ನವೆಂಬರ್ ೪ ಕೊನೆಯ ದಿನವಾಗಿದ್ದು ಅಷ್ಟರೊಳಗೆ ವರದಿ ವಿರೋದಿಸುವ ಬಗ್ಗೆ ಸಹಿ ಹಾಕಿ, ಕೇಂದ್ರ ಪರಿಸರ ಇಲಾಖೆಯ ಮೂಲಕ ಸುಪ್ರಿಂ ಕೋರ್ಟಿನ ಹಸಿರು ಪೀಠದಲ್ಲಿ ಮೇಲ್ಮನವಿಯನ್ನು ದಾಖಲಿಸಬೇಕಿದೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ. ಇಲ್ಲಿ ರಾಜಕೀಯ ಮರೆತು ಹೋರಾಟ ಮಾಡದಿದ್ದರೇ ನಮ್ಮನ್ನು ಧಮನಿಸುವ ಕೆಲಸವಾಗುತ್ತದೆ ಎಂದವರು ಎಚ್ಚರಿಸಿದರು. (ಕುಂದಾಪ್ರ ಡಾಟ್ ಕಾಂ ವರದಿ)

ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ನಮ್ಮ ವಿರೋಧವಿಲ್ಲ. ಪರಿಸರ, ಪ್ರಾಣಿಗಳ ಉಳಿವು ಕೂಡ ಮುಖ್ಯವೇ. ಆದರೆ ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವವರಿಗೆ, ಮನೆ ಕಟ್ಟಿಕೊಂಡು ನೆಲೆನಿಂತವರಿಗೆ ಬದುಕಲು ಬಿಡಿ. ಅವರ ಜಾಗವನ್ನು ಹೊರತುಪಡಿಸಿ ವರದಿಯನ್ನು ಅನುಷ್ಠಾನಗೊಳಿಸಿ, ಕಾಡಿಗೂ ತಡೆಬೇಲಿ ಹಾಕಿ ಎಂದವರು ಹೇಳಿದರು.

ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಅನಂತಮೂರ್ತಿ ವರದಿಯನ್ನು ವಿರೋಧಿಸಿ ಸಹಿ ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾ.ಪಂ ಉಪಾಧ್ಯಕ್ಷ ವಿಶ್ವನಾಥ, ರೈತ ಮುಖಂಡ ದೀಪಕ್‌ಕುಮಾರ್ ಶೆಟ್ಟಿ ಹಾಗೂ ಜಡ್ಕಲ್ ಗ್ರಾ.ಪಂ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)

Exit mobile version