Kundapra.com ಕುಂದಾಪ್ರ ಡಾಟ್ ಕಾಂ

ಸರಕಾರಿ ಶಾಲೆಗಳ ಬಗ್ಗೆ ವಿಶ್ವಾಸ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು – ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸರಕಾರಿ ಶಾಲೆಗಳ ಪ್ರಗತಿ ಹಾಗೂ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸುವ ಶಕ್ತಿ ಸರಕಾರಿ ಶಾಲಾ ಶಿಕ್ಷಕರಿಗಿದೆ. ಸಮಾಜಕ್ಕೆ ಕನ್ನಡ ಮಾಧ್ಯಮ ಶಾಲೆಗಳು ಸಶಕ್ತವಾಗಿದೆ ಹಾಗೂ ಅದರ ಉಳಿವು ಸಾಧ್ಯವಿದೆ ಎಂಬ ವಿಶ್ವಾಸ ಮೂಡಿಸಬೇಕಾದ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಬೈಂದೂರು ವಿಧಾನಸಬಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.

Watch Video

ಅವರು ಗುರುವಾರ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಬೈಂದೂರು ತಾಲೂಕು ಸರಕಾರಿ ಹಾಗೂ ಅನುದಾನಿತ ಶಾಲಾ ಮುಖ್ಯೋಪಧ್ಯಾಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪೋಷಕರಲ್ಲಿ ಹಿಂದಿನಂತೆ ಆಂಗ್ಲ ಮಾಧ್ಯಮದ ವ್ಯಾಮೋಹವಿಲ್ಲ. ಆದರೆ ಸೌಲಭ್ಯಗಳ ಬಗ್ಗೆ ಅವರು ವಿಶೇಷ ಮುತುವರ್ಜಿ ವಹಿಸುತ್ತಾರೆ. ಸರಕಾರಿ ಶಾಲೆಗಲ್ಲಿ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ ದೊರೆಯುವಂತಾದರೆ ಸರಕಾರಿ ಶಾಲೆಗಳಲ್ಲಿಯೂ ಮಕ್ಕಳು ದಾಖಲಾತಿ ಸಹಜವಾಗಿ ಏರುತ್ತದೆ. ವಿದ್ಯಾರ್ಥಿಗೆ ತಕ್ಕುದಾಗಿ ಶಿಕ್ಷಕರ ಅನುಪಾತ, ಮೂಲಭೂತ ಸೌಕರ್ಯಗಳನ್ನು ಹೊಂದಿವುದು ಬಹುಮುಖ್ಯವಾಗಿದೆ ಎಂದರು.

ಕನ್ನಡ ಶಾಲೆಗಳ ಉಳಿವಿಗೆ ಯೋಜನೆ:
ಪ್ರಜಾಪ್ರಭತ್ವದಲ್ಲಿ ಶಾಸಕದ ಅವಧಿ 5 ವರ್ಷ ಮಾತ್ರ. ಆದರೆ ದೀರ್ಘಾವಧಿಯಲ್ಲಿ ಸರಕಾರಿ ಸೇವೆಯಲ್ಲಿರುವವರು ಶಿಕ್ಷಕರು. ಹಾಗಾಗಿ ಶಾಲೆಯ ಅಭಿವೃದ್ಧಿ ಹೇಗಾಗಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಅರಿವು ಮತ್ತು ಕಾಳಜಿ ಶಿಕ್ಷಕರಿಗೆ ಹೆಚ್ಚಿರುತ್ತದೆ. ಶಾಸಕನಾಗಿ ಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯವನ್ನು ದೊರಕಿಸಿಕೊಡಲು ನನ್ನ ಕಡೆಯಿಂದ ಗರಿಷ್ಠ ಪ್ರಯತ್ನ ನಡೆಯಲಿದೆ. ಸರಕಾರಕ್ಕೆ ಬೇಡಿಕೆ ಸಲ್ಲಿಸುವುದು ಒಂದು ಭಾಗವಾದರೆ, ಪರ್ಯಾಯವಾಗಿ ನಟ ರಿಶಬ್ ಶೆಟ್ಟಿ ಅವರ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ಕನ್ನಡ ಶಾಲೆಗಳ ಉಳಿವು ಹಾಗೂ ಅಭಿವೃದ್ಧಿಗೆ ವಿಶೇಷ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದೆಲ್ಲದರ ಅನುಷ್ಠಾನಕ್ಕೆ ಕ್ರೀಯಾಶೀಲ ಹಾಗೂ ಆಸಕ್ತ ಶಿಕ್ಷಕರ ಸಹಕಾರವೂ ಅಗತ್ಯವಿದೆ ಎಂದರು.

ಸ್ಥಳೀಯ ದಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ:
ಸರಕಾರದಿಂದ ಮೂಲಭೂತ ಸೌಕರ್ಯಗಳಿಗಾಗಿ ಮನವಿ ಮಾಡುವುದರ ಜೊತೆಗೆ ಹಳೆವಿದ್ಯಾರ್ಥಿಗಳು, ಎಸ್.ಡಿಎಂಸಿ, ಪೋಷಕರು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಗಳ ಅಭಿವೃದ್ಧಿ ಮಾಡಲು ಸಾಧ್ಯವಿದೆ. ಆ ಬಗ್ಗೆಯೂ ಶಿಕ್ಷಕರು ಗಮನ ಹರಿಸಬೇಕು. ಜೊತೆಗೆ ಯಾರನ್ನು ಸಂಪರ್ಕಿಸಿದರೆ ಕಾರ್ಯಸಾಧ್ಯವೆಂದು ತಿಳಿಸಿದರೇ ನನ್ನ ಕಡೆಯಿಂದಲೇ ದಾನಿಗಳನ್ನು ಸಂಪರ್ಕಿಸಿ ಮನವಿ ಮಾಡುವ ಕೆಲಸ ಮಾಡುತ್ತೇನೆ ಎಂದರು.

ರಾಜಕೀಯ ಮಾಡುವುದಿದ್ದರೆ ರಾಜಿನಾಮೆ ಕೊಟ್ಟು ಬನ್ನಿ:
ಶಿಕ್ಷಕರ ರಾಜಕೀಯರ ಕುರಿತು ಮಾತನಾಡಿದ ಶಾಸಕ ಗಂಟಿಹೊಳೆ ಅವರು, ಕೆಲವೊಂದು ಶಿಕ್ಷಕರು ತುಂಬಾ ರಾಜಕೀಯ ಮಾಡುತ್ತಾರೆ ಎಂಬ ಮಾತುಗಳು ಆಗಾಗ್ಗೆ ಕೇಳಿದ್ದೇನೆ. ರಾಜಕೀಯದಿಂದ ಶಾಲೆಯ ಅಭಿವೃದ್ಧಿಗೆ ಸಹಕಾರವಾಗುದಾದರೆ ಸಂತೋಷ. ಆದರೆ ಪಾಠ ಮಾಡುವ ಬದಲಿಗೆ ರಾಜಕೀಯ, ಬೇರೆ ವ್ಯವಹಾರ ಮಾಡುವುದಾದರೆ ಶಿಕ್ಷಕ ಹುದ್ದೆಗೆ ರಾಜಿನಾಮೆ ನೀಡಿ ನಮ್ಮೊಂದಿಗೆ ಬನ್ನಿ. ಇಲ್ಲವಾದರೆ ಲೋಪವಿಲ್ಲದೇ ಕರ್ತವ್ಯದಲ್ಲಿ ತೊಡಗಿಕೊಳ್ಳಿ ಎಂದು ಎಚ್ಚರಿಸಿದರು.

ಶಿಕ್ಷಕ ವೃತ್ತಿ ಎಲ್ಲಕ್ಕಿಂತ ಶ್ರೇಷ್ಠ:
ನೀವೇ ಕಲಿಸಿದ ವಿದ್ಯಾರ್ಥಿಗಳು ಮುಂದೊಂದು ದಿನ ಉತ್ತಮ ಹುದ್ದೆಗೇರಿ ಶಿಕ್ಷಕರ ಮುಂದೆ ಬಂದು ನಿಂತಾಗ ಅತ್ಯಂತ ಸಂತೋಷ ಪಡುವವರು ಶಿಕ್ಷಕರೇ. ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿಯಲ್ಲೊಂದು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗೋಣ. ಸಮೃದ್ಧ ಬೈಂದೂರು ಕಲ್ಪನೆಯಲ್ಲಿ ಬಹುಮುಖ್ಯವಾದುದು ಕನ್ನಡ ಶಾಲೆಗಳ ಅಭಿವೃದ್ಧಿ. ಶಿಕ್ಷಕರ ಸಹಭಾಗಿತ್ವವಿಲ್ಲದೇ ಕನ್ನಡ ಶಾಲೆಗಳ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಬೈಂದೂರಿನ ಅಭಿವೃದ್ಧಿಯಲ್ಲಿ ನೀವೂ ಜೊತೆಯಾಗಿ ಎಂದು ಮನವಿ ಮಾಡಿದರು.

ಬೈಂದೂರು ಶಾಲೆಗಳ ಪ್ರಸ್ತುತ ಸ್ಥಿತಿಗತಿ, ಶಾಲಾ ಶಿಕ್ಷಕರ ಅನುಪಾತ, ಮೂಲಭೂತ ಸಮಸ್ಯೆಗಳು, ಶಾಲೆಯ ಅಭಿವೃದ್ಧಿಗಿರುವ ಸಾಧ್ಯತೆಗಳ ಬಗ್ಗೆ ಶಾಸಕರು ವಿವಿಧ ಶಾಲಾ ಮುಖ್ಯೋಪಧ್ಯಾಯರೊಂದಿಗೆ ಸಂವಾದ ನಡೆಸಿದರು.

ಸಭೆಯಲ್ಲಿ ಬೈಂದೂರು ಕ್ಷೇತ್ರ ಶಿಕ್ಷಕಣಾಧಿಕಾರಿ ಮಂಜುನಾಥ್ ಎಂ.ಜಿ., ಶಿಕ್ಷಣ ಸಂಯೋಜನಾಧಿಕಾರಿ ಕರುಣಾಕರ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಂದೂರು ವಲಯಾಧ್ಯಕ್ಷ ಶೇಖರ್, ಮುಖ್ಯೋಪಧಾಯರ ಸಂಘದ ಅಧ್ಯಕ್ಷ ಜಯಾನಂದ ಪಟಗಾರ್, ಬೈಂದೂರು ಜ್ಯೂನಿಯರ್ ಕಾಲೇಜು ಉಪಪ್ರಾಂಶುಪಾಲ ಪದ್ಮನಾಭ್, ಮಾದರಿ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಸಂಜಯ ದೇವಾಡಿಗ, ಮುಖಂಡರಾದ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮಾದರಿ ಶಾಲೆ ಮುಖ್ಯಶಿಕ್ಷದ ಜನಾರ್ದನ ದೇವಾಡಿಗ ಸ್ವಾಗತಿಸಿ, ಸಹಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

Exit mobile version