Kundapra.com ಕುಂದಾಪ್ರ ಡಾಟ್ ಕಾಂ

ಸಕಾರಾತ್ಮಕವಾಗಿ ಬದುಕಿನ ಸ್ವೀಕಾರವೇ ಸಮಸ್ಯೆಗೆ ಪರಿಹಾರ: ಡಾ. ಪಿ.ವಿ ಭಂಡಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಾಲೇಜು ವಿದ್ಯಾರ್ಥಿಗಳು ಹರೆಯವು ಅಲ್ಲದ ವಯಸ್ಕರು ಅಲ್ಲದ ವಯಸ್ಸಿನಲ್ಲಿ ಬರುವಂತಹ ಸಮಸ್ಯೆ ಮತ್ತು ಸೋಲುಗಳನ್ನು ಎದುರಿಸಲು ತಮಗೆ ತಾವೇ ತಯಾರಾಗಬೇಕು. ಅವಕಾಶಗಳು ಎಲ್ಲರಿಗೂ ಇದ್ದೆ ಇದೆ ಎಂಬುದರಲ್ಲಿ ನಂಬಿಕೆ ಇಡಬೇಕು ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಕರೆ ನೀಡಿದರು.

ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ನಕಾರಾತ್ಮಕ ನೆಲೆಯ ಮೌಲ್ಯಮಾಪನ, ಸಾಮಾಜಿಕ ಆತಂಕ ಇವೆಲ್ಲ ಸಮಸ್ಯೆಗಳು ಕಾಡುತ್ತವೆ. ಅದರಿಂದ ಹೊರಬರಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಆದರೆ ನಿಮ್ಮ ಬದುಕು ಚೆನ್ನಾಗಿ ಇರಬೇಕಾದರೆ ಈ ಸಮಸ್ಯೆ ಗಳಿಂದ ಹೊರಗೆ ಬರಲೇಬೇಕು. ಹೊರಗೆ ಬರಲು ದಾರಿಗಳು ಸಹ ನಮ್ಮೊಳಗೆ ಅಡಗಿರುತ್ತದೆ. ನಿಮ್ಮ ಸಮಸ್ಯೆಗಳ ಕುರಿತು ಸ್ನೇಹಿತರು, ಗುರುಗಳು ಅಥವಾ ಯಾರಾದರೂ ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಲ್ಲದಿದ್ದರೆ ಮನೋವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ, ಎಲ್ಲವುಗಳಿಗಿಂತ ಆತ್ಮ ಜಾಗೃತಿ, ಸಕಾರಾತ್ಮಕ ನೆಲೆಯಲ್ಲಿ ಬದುಕಿನ ಸ್ವೀಕಾರ, ಸಮಸ್ಯೆ ಬಗ್ಗೆ ಪರಿಹಾರ ಹುಡುಕಬೇಕು. ಹಾಗೆ ನಮ್ಮ ಭವಿಷ್ಯದ ನಿರ್ಣಯಕ್ಕೆ ಪೂರಕ ತಯಾರಿಗಳ ಕಡೆಗೆ ಗಮನ ಹರಿಸಬೇಕು. ಸಮತೋಲನದ ಸಾಮರ್ಥ್ಯ ಮತ್ತು ಒಳ್ಳೆಯ ಆರೋಗ್ಯವಿರಬೇಕು. ಕನಸು ಕಂಡು, ಅದರ ಮಾರ್ಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಸ್ತು, ಸಮರ್ಪಣಾ ಭಾವ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನೆಲೆಯಲ್ಲಿ ಪ್ರಯತ್ನ ಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರ ಆಚಾರಿ ವಹಿಸಿದ್ದರು.

ಮಹಿಳಾ ವೇದಿಕೆ ಸಂಯೋಜಕರಾದ ಮೀನಾಕ್ಷಿ ಎನ್ ಎಸ್. ಸ್ವಾಗತಿಸಿದರು.

ವಿದ್ಯಾರ್ಥಿನಿಯರಾದ ಯಜುಷಾ ಕಾರ್ಯಕ್ರಮ ನಿರೂಪಿಸಿ, ಫಾತಿಮಾ ಅನಾಜ್ ಅತಿಥಿಗಳನ್ನು ಪರಿಚಯಿಸಿ, ವರೇಣ್ಯ ನಾಯಕ್ ವಂದಿಸಿದರು.

Exit mobile version