ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತೀಯ ವಾಗ್ಮಯ ಬಹುವಾಗಿ ಋಷಿ ಪರಂಪರೆ ಆವರಿಸಿಕೊಂಡಿದೆ. ಅದನ್ನು ಬಿಟ್ಟು ಭಾರತೀಯ ಸಾಹಿತ್ಯವನ್ನು ಕಟ್ಟಿಕೊಡಲು ಸಾಧ್ಯವಿಲ್ಲ, ಋಷಿ ಪರಂಪರೆಯನ್ನು ಭಾರತೀಯತೆಯಿಂದ ಪ್ರತ್ಯೇಕಿಸುವುದೆಂದರೆ ಮಣ್ಣು – ಬೇರು ಬೇರ್ಪಡಿಸಿದಂತೆ ಎಂದು ಚಿಂತಕ ರೋಹಿತ್ ಚಕ್ರತೀರ್ಥ ಹೇಳಿದರು.
ಲಾವಣ್ಯ ರಿ. ಬೈಂದೂರು, ರೋಟರಿ ಕ್ಲಬ್ ಬೈಂದೂರು ಜಾಗೂ ಸಮನ್ವಿತ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಭಾನುವಾರ ರೋಟರಿ ಭವನದಲ್ಲಿ ಆಯೋಜಿಸದ ಕಾರ್ಯಕ್ರಮದಲ್ಲಿ ಸದ್ಯೋಜಾತರ ವಾಚಕ್ನವೀ ಮತ್ತು ಜಿತ್ವರೀ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಋಷಿಗಳೆಂದರೆ ಸಮಾಜದಿಂದ ದೂರ ಇರುವವರು ಎಂಬ ತಪ್ಪು ಕಲ್ಪನೆ ಇದೆ. ಆದರೆ ಸಮಾಜದ ಭಾಗವಾಗಿಯೇ ಇದ್ದು, ಮಾರ್ಗದರ್ಶನ ಮಾಡುತ್ತಾ ಲೌಕಿಕ ಸುಖಗಳನ್ನು ತ್ಯಜಿಸಿ ಬದುಕಿದವರು. ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇರುವ ಅಸಡ್ಡೆಯೇ ಋಷಿ ಪರಂಪರೆಯ ಅಪಹಾಸ್ಯಕ್ಕೆ ಕಾರಣ. ಪ್ರತಿ ಮುನಿಯ ಜೀವನ ಚರಿತ್ರೆಯಲ್ಲಿಯೂ ಬಹುದೊಡ್ಡ ಆದರ್ಶವಿದೆ. ಅಂತಹ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡೋಣ. ಕಟ್ಟುವ ಸಂಸ್ಕೃತಿಯ ಭಾಗವಾಗೋಣ ಎಂದು ಕರೆ ನೀಡಿದರು.
ಲೇಖಕ, ಸಂಶೋಧಕ ಸದ್ಯೋಜಾತ ಅವರು ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಕೃತಿಗಳ ಹಿಂದಿನ ಆಶಯ ತಿಳಿಸಿದರು. ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಬಿ. ನರಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ನಿಕಟಪೂರ್ವ ಅಧ್ಯಕ್ಷ ಎಚ್. ಉದಯ ಆಚಾರ್ ಪ್ರಾರ್ಥಿಸಿದರು. ಶಿಕ್ಷಕ ಮಂಜುನಾಥ ಭಟ್, ಗಣಪತಿ ಎಸ್ ಅತಿಥಿಗಳ ಪರಿಚಯ ಮಾಡಿದರು. ಬೈಂದೂರು ರೋಟರಿ ಅಧ್ಯಕ್ಷ ಪ್ರಸಾದ್ ಪ್ರಭು ಸ್ವಾಗತಿಸಿದರು. ಲಾವಣ್ಯ ಕಾರ್ಯದರ್ಶಿ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸದಸ್ಯ ಗೋವಿಂದ ಕೆರ್ಗಾಲು ಅವರು ಕಾರ್ಯಕ್ರಮ ನಿರೂಪಿಸಿದರು.