Kundapra.com ಕುಂದಾಪ್ರ ಡಾಟ್ ಕಾಂ

ಸಮಾಜವನ್ನು ಒಗ್ಗೂಡಿಸಿ ಕೊಂಡೊಯ್ಯುವ ಜವಾಬ್ದಾರಿ ಮಾಧ್ಯಮಕ್ಕಿದೆ: ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಎಸಿ ರಶ್ಮಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪತ್ರಿಕೆಯಲ್ಲಿ ಬರೆದಿರುವುದೆಲ್ಲಾ ಸತ್ಯ ಎಂದು ಸಮಾಜ ನಂಬುತ್ತದೆ. ಹಾಗಾಗಿ ಪತ್ರಕರ್ತರ ಲೇಖನಿ ಸಮಾಜ ಒಗ್ಗೂಡಸಬೇಕೇ ಹೊರತು ಒಡೆಯುವಂತಾಗಬಾರದು. ಪತ್ರಕರ್ತರು ಯಾವತ್ತೂ ನಿಷ್ಠೆ ಬದಲಿಸದೇ ಬದುಕಿದರೆ ಮಾತ್ರ ಸಶಕ್ತ ಸಮಾಜ ಕಟ್ಟಲು ಸಾಧ್ಯ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಹೇಳಿದರು.

ಕುಂದಾಪುರ ತಾಲೂಕು ಪತ್ರಕರ್ತರ ಸಂಘ ನೇತೃತ್ವದಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ಸಹಕಾರದಲ್ಲಿ ಕಾಲೇಜು ಕೋಯಕುಟ್ಟಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಸಮಾಜದ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿದ್ದು, ಕಟ್ಟಕಡೆಯ ವ್ಯಕ್ತಿಗೂ ಕೂಡಾ ಮಾಹಿತಿ ನೀಡುವ ಜೊತೆ ಸತ್ಯವನ್ನು ಮುಟ್ಟಿಸುವ, ಜಾಗೃತಿ ಮೂಡಿಸು ಕೆಲಸ ಪತ್ರಿಕೆಯಿಂದ ಆಗುತ್ತದೆ ಎಂದರು.

ಕುಂದಾಪುರ ಡಿಎಸ್ಪಿ ಬೆಳ್ಳಿಯಪ್ಪ ಕೆ.ಯು., ಸಮಾಜಿಕ ಜಾಲತಾಣ ಅನಾವರಣ ಮಾಡಿ, ಪತ್ರಿಕಾ ಧರ್ಮ ಹೋಗಿ ಉದ್ಯಮವಾಗಿ ಬದಲಾಗಿದ್ದು, ಪತ್ರಕರ್ತರು ಹೆಚ್ಚು ಹೆಚ್ಚು ಓದಿ, ಜ್ಞಾನ ವೃದ್ಧಿಸಿಕೊಂಡು ತಪ್ಪುಗಳನ್ನು ಸಮಾಜದ ಮುಂದೆ ತೆರೆದಿಟ್ಟು ಸಮಾಜ ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದ ದೊಡ್ಡ ಜವಾಬ್ದಾರಿಯಿದೆ ಎಂದರು.

ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್, ನಿವೃತ್ತ ಪ್ರಾಧ್ಯಾಪಕ ಎಸ್.ಜನಾರ್ದನ ಮರವಂತೆ ವಿಶೇಷ ಉಪನ್ಯಾಸ ಮಾಡಿದರು.

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜಿ.ಎಂ.ಗೊಂಡ, ಜಿಲ್ಲಾ ಪತ್ರಕರ್ತ ಸಂಘ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು, ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷ ವಿನಯ ಪಾಯಸ್, ಜಿಲ್ಲಾ ರಜತಮಹೋತ್ಸವ ಸಮಿತಿ ಕಾರ್ಯದರ್ಶಿ ಜಯಕರ ಸುವರ್ಣ ಇದ್ದರು.

ತಾಲೂಕು ಪತ್ರಕರ್ತ ಸಂಘ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ, ಉಪಾಧ್ಯಕ್ಷ ಚಂದ್ರಮಾ ತಲ್ಲೂರು, ಕಾರ್ಯದರ್ಶಿ ಗಣೇಶ್ ಬೀಜಾಡಿ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಕಾಲೇಜ್ ವಿದ್ಯಾರ್ಥಿನಿಯರಾದ ಸೌಜನ್ಯ ದೀಕ್ಷಿತ, ದೀಕ್ಷಿತಾ ಪ್ರಾರ್ಥಿಸಿದರು. ತಾಲೂಕು ಪತ್ರಕರ್ತ ಸಂಘ ಮಾಜಿ ಅಧ್ಯಕ್ಷ ಶಶಿಧರ ಹೆಮ್ಮಾಡಿ ಸ್ವಾಗತಿಸಿದರು. ಪತ್ರಕರ್ತ ಪ್ರಶಾಂತ ಪಾದೆ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಗಣೇಶ್ ಬೀಜಾಡಿ ವಂದಿಸಿದರು. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ನಿರೂಪಿಸಿದರು.

* ಪರ್ತಕರ್ತರಿಗೆ ಸಾಮಾಜಿಕ ಬದ್ದತೆ, ಕ್ರಿಯಾಶೀಲತೆ, ನೋಡುವ ದೃಷ್ಟಿಕೋನ ಇರಬೇಕು. ಏನು ಮಾಡಿದರೂ ಅದರಿಂದ ಸಮಾಜಕ್ಕೆ ಒಳಿತಾಗುವ ಉದ್ದೇಶವಿರಬೇಕು. ಪ್ರಸಕ್ತ ಕಾಲಘಟ್ಟದಲ್ಲಿ ಡಿಜಿಟಲ್ ಮಾಧ್ಯಮ ಅತ್ಯಂತ ಪ್ರಭಾಶಾಲಿಯಾಗುತ್ತಿದ್ದು, ಅದರ ಸದ್ಬಳಕೆ ಸದ್ಬಳಕೆಯಾಗಬೇಕೇ ವಿನಹಾ ದುರ್ಬಳಕೆ ಕೂಡದು. ಸಮಾಜಕ್ಕೆ ಒಳ್ಳೆಯದಾಗಬೇಕು ಎನ್ನುವ ಗುರಿ ಪರ್ತಕರ್ತರಿಗೆ ಇರಬೇಕು.
ಯು.ಕೆ. ಕುಮಾರನಾಥ್, ಹಿರಿಯ ಪತ್ರಕರ್ತ, ಉಡುಪಿ.

* ಸಮುದಾಯದ ಹಿತಸಾಧನೆ ಪತ್ರಿಕೆ ಹಾಗೂ ಪತ್ರಿಕೆಗಳ ಗುರುಯಾಗಿರಬೇಕಿದ್ದು, ಜಾತಿ,ಧರ್ಮ ಸಂಘರ್ಷಗಳ ನಡುವೆ ಸಮನ್ವಯ ಉಂಟಾಗುವಂತೆ ಪತ್ರಿಕೆಗಳು ಕೆಲಸ ಮಾಡಬೇಕೇ ವಿನಹ ಉದ್ಭವಿಸಿದ ಬಿಕ್ಕಟ್ಟುಗಳ ನಡುವೆ ಬೆಸುಗೆ ಹಾಕು ಕೆಲಸ ಮಾಡಿದ್ದರೆ, ಮುಂದೊಂದು ದಿನ ಪತ್ರಿಕೋದ್ಯಮ ಕೂಡಾ ಕಲವಲು ದಾರಿಯಲ್ಲಿ ಸಾಗುವ ಅಪಾಯವಿದೆ. ಸಮುದಾಯ ಸಮಾಜದ ಹಿತ ಕಾಯುವ ಕೆಲಸ ಪತ್ರಿಕೋದ್ಯಮದಿಂದ ಆಗಬೇಕು. – ಎಸ್. ಜನಾರ್ದನ್ ಮರವಂತೆ, ಹಿರಿಯ ಪತ್ರಕರ್ತ

Exit mobile version