Kundapra.com ಕುಂದಾಪ್ರ ಡಾಟ್ ಕಾಂ

ಬಸ್ರೂರು: ಮೈಲಾರ ದೇವರ ವಿಗ್ರಹ ಪತ್ತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಬಸ್ರೂರಿನಲ್ಲಿ ಮೈಲಾರ (ಖಂಡೋಬ) ದೇವರ ಎರಡು ವಿಗ್ರಹ ಪತ್ತೆಯಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಆದರೆ ಬಸ್ರೂರಿನಲ್ಲಿ ಮೈಲಾರ ದೇವರ ಆರಾಧನೆ ಹಿಂದೆ ನಡೆಯುತ್ತಿದ್ದ ಬಗ್ಗೆ ಈ ವಿಗ್ರಹದ ಮೂಲಕ ದಾಖಲೆ ದೊರೆತಂತಾಗಿದೆ.

1.ಮೈಲಾರ ದೇವರ ವಿಗ್ರಹ
ಕುದುರೆ ಏರಿದಂತ ವೀರ ಯೋಧನಂತೆ ಕಂಡು ಬಂದಿದ್ದು, ಕೈಯಲ್ಲಿ ಕಡ್ಗದಂತೆ ಕಂಡು ಬಂದಿದೆ. ಎದೆಗೆ ವೀರ ಯೋಧ ತೊಡುವಂತೆ ರಕ್ಷಾ ಕವಚ ಕೂಡಾ ಕಾಣಲ್ಪಟ್ಟಿದೆ. ಅಲಂಕಾರಗೊಂಡ ಕುದುರೆ ಕಾಲು ಸ್ವಲ್ಪ ಮಡಿಚಿದ ರೀತಿಯಲ್ಲಿದೆ .ಕ್ರಿ.ಶ 15 ರಿಂದ 16ನೇ ಶತಮಾನಕ್ಕೆ ಹೋಲುವಂತಿದೆ.

2.ಮೈಲಾರ ದೇವರ ಶಿಲಾ ಫಲಕ
ಶ್ರೀ ದೇವಾನಂದ ಶೆಟ್ಟಿ ಹಳ್ನಾಡು ಇವರ ಕೆರೆಯ ಹೂಳು ಎತ್ತುವಾಗ ವಿಗ್ರಹ ಸಿಕ್ಕಿರುವ ವಿಚಾರ ತಿಳಿಸಿರುತ್ತಾರೆ. ಇದು ಮೈಲಾರ ದೇವರ ಶಿಲಾ ಫಲಕವಾಗಿದೆ.ಇಲ್ಲಿ ಸ್ತ್ರೀ ಪುರಷ ಕುದುರೆ ಏರಿ ಖಡ್ಗ ಹಿಡಿದ ಶಿಲ್ಪವಿದೆ. ಈ ಶಿಲ್ಪ ಕ್ರಿ.ಶ 16ನೇ ಶತಮಾನಕ್ಕೆ ಹೋಲುವಂತಿದೆ.

ಬಸ್ರೂರಿನಲ್ಲಿ ಸಿಕ್ಕಿರುವುದು ವಿಗ್ರಹ ದ ಮೂಲಕ ಕರಾವಳಿಯಲ್ಲಿ ಮೈಲಾರ ಆರಾಧನೆಯ ವಿಚಾರ ದ ಬಗ್ಗೆ ನಾವು ತಿಳಿಯಬಹುದಾಗಿದೆ. ಪ್ರಸ್ತುತ ದಿನದಲ್ಲಿ ಕುಂದಾಪುರ ಚಿಕ್ಕಮ್ಮನ ಸಾಲು ರಸ್ತೆಯಲ್ಲಿ ಮೈಲಾರೇಶ್ವರ(ಮೈಲಾರ ಮಠ,ವಿಶ್ವೇಶ್ವರಯ್ಯ ದೇವರು) ಸನ್ನಿಧಿ ಹಾಗೂ ಪಕ್ಕದಲ್ಲೇ ಲಿಂಗನಮುದ್ರೆ ಕಲ್ಲುಬ ಇರುವುದನ್ನು ಗಮನಿಸಬಹುದಾಗಿದೆ. ಮಂಗಳೂರು ಜಪ್ಪು ಬೊಪ್ಪಾಲ್ ನಲ್ಲಿ ದೊರೆತ ವಿಜಯನಗರ ಶಾಸನ ಕ್ರಿ.ಶ 1383 ರ ಕಾಲ ಮಾನದ ಶಾಸನ(640 ವಷ೯ದ ಹಿಂದಿನ ಶಾಸನ) ಉಲ್ಲೇಖದಂತೆ ಬಡಗ ಮೈಲಾರ ದೇವರಿಗೆ ಅಂದರೆ ಬಡಗ ಭಾಗದ ಮೈಲಾರ ದೇವರು ಇರುವ ಕುರುಹನ್ನು ಶಾಸನ ದಲ್ಲಿ ನೀಡಿದಂತಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಈ ವಿಗ್ರಹ ವನ್ನು ಖಂಡೋಬನೆಂದು ಕರೆದರೂ ಮೈಲಾರ ದೇವರಿಗೆ ಅನೇಕ ಹೆಸರಿನಿಂದ ಕರೆಯುತ್ತಾರೆ.

ಬಸ್ರೂರು ವಿಗ್ರಹ ವನ್ನು ಪರಿಚಯಿಸುವ ದಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ಜಿಲ್ಲಾ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಹಾಗೂ ಶ್ರೀ ಧಮ೯ಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು (ಸ್ವಾಯತ್ತ), ಉಜಿರೆ ಇಲ್ಲಿ ಇತಿಹಾಸ ಉಪನ್ಯಾಸಕರು ಕುಮಾರಿ ಅಭಿಜ್ಞಾ ಉಪಾಧ್ಯಾಯ, ನಿವೃತ್ತ ಪುರಾತತ್ವ ಶಾಸ್ತ್ರದ ಉಪನ್ಯಾಸಕರಾಗಿರುವ ಪ್ರೋ ಟಿ. ಮುರುಗೇಶ್ ಮಾಗ೯ದಶ೯ನದಲ್ಲಿ ಪತ್ತೆ ಹಚ್ಚಲಾಗಿದ್ದು , ವಿಗ್ರಹ ವನ್ನು ಮೈಲಾರ ವಿಗ್ರಹವೆಂದು ಖಚಿತ ಪಡಿಸಿದ್ದಾರೆ.

ಸಂಶೋಧನಾ ಕಾಯ೯ದಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲಾ ಖಜಾಂಚಿ ಮಹೇಶ್ ಕಿಣಿ, ಹಳ್ನಾಡು ದೇವಾನಂದ ಶೆಟ್ಟಿ , ದಿ. ವೆಂಕಟರಮಣ ಉಪಾಧ್ಯ ರವರ ಪುತ್ರಿ ಜಯಲಕ್ಷ್ಮೀ ಎಸ್.ಎನ್.ಭಟ್ ನಿವೃತ್ತ ಶಿಕ್ಷಕಿ ಇವರು ಸಹಕರಿಸಿದ್ದಾರೆ.

Exit mobile version