Kundapra.com ಕುಂದಾಪ್ರ ಡಾಟ್ ಕಾಂ

ಮುಸ್ಲಿಂ ಬಾಂಧವ್ಯ ವೇದಿಕೆ ಪದಾಧಿಕಾರಿಗಳಿಂದ ಆದಿಚುಂಚನಗಿರಿ ಮಠ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಮುಸ್ಲಿಂ ಸಾಹಿತಿಗಳು, ಲೇಖಕರು, ಚಿಂತಕರು ಮತ್ತು ಸಾಧಕರ ವೇದಿಕೆಯಾದ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ನಿಯೋಗ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿಯಾಗಿ ಸುದೀರ್ಘ ಸುಮಾರು 1 ಗಂಟೆ 30 ನಿಮಿಷದಷ್ಟು ಕಾಲ ಮಾತುಕತೆ ನಡೆಸಿತು.

ಸಂಘಟನೆಯ ಉದ್ದೇಶ, ಕಾರ್ಯ ಮತ್ತು ಸ್ವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿಗಳು “ಕರ್ನಾಟಕದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯು ಎಲ್ಲ ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಹೊಸ ಭಾಷ್ಯ ಮುನ್ನುಡಿ ಬರೆಯಲಿದೆ. ಸಮುದಾಯಗಳ ನಡುವೆ ಕಾರಣಾಂತರಗಳಿಂದ ಉದ್ಭವವಾಗುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಸೂಕ್ತ ಸಂಪರ್ಕ ಸಾಧಿಸಲು ಇಂತಹ ಪ್ರಬುದ್ಧರ ವೇದಿಕೆಗಳು ಅವಶ್ಯಕ. ಪ್ರಜ್ಞಾವಂತರು ಮತ್ತು ಪ್ರತಿಭಾವಂತರಿಂದ ಕೂಡಿದ ಈ ವೇದಿಕೆಯು ರಾಜಕೀಯ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಸಮುದಾಯವನ್ನು ಸೂಕ್ತ ರೀತಿಯಲ್ಲಿ ಖಂಡಿತ ಪ್ರತಿನಿಧಿಸುವ ವಿಶ್ವಾಸವಿದೆ. ಆದಿಚುಂಚನಗಿರಿ ಮಠ ಮತ್ತು ಮುಸ್ಲಿಂ ಸಮುದಾಯದ ಬಾಂಧವ್ಯಕ್ಕೆ ಒಂದು ದೊಡ್ಡ ಪರಂಪರೆ ಮತ್ತು ಇತಿಹಾಸವಿದೆ. ವೇದಿಕೆಯ ಸದಸ್ಯರು ಮಠಕ್ಕೆ ಸೌಹಾರ್ದ ಭೇಟಿ ನೀಡುವ ಮೂಲಕ ಆ ಪರಂಪರೆಗೆ ಮತ್ತಷ್ಟು ಮೆರುಗು ನೀಡಿದ್ದು ಮಾತ್ರವಲ್ಲ ಸುದೀರ್ಘ ಸ್ನೇಹಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಮಠ ಭೇಟಿ ಸಂತಸ ನೀಡಿದೆ ” ಎಂದು ಹೇಳಿದರು.

ನಿಯೋಗದಲ್ಲಿ ಅಧ್ಯಕ್ಷ ಅನೀಸ್ ಪಾಶಾ, ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್, ಖಜಾಂಚಿ ಮುಬಾರಕ್ ಗುಲ್ವಾಡಿ, ನಝೀರ್ ಬೆಳುವಾಯಿ, ರಶೀದ್ ಉಪ್ಪಿನಂಗಡಿ, ಚಮನ್ ಷರೀಫ್ ಚಿತ್ರದುರ್ಗ, ಸಯ್ಯದ್ ಗನಿ ಖಾನ್ ಮಂಡ್ಯ, ಅಬ್ದುಲ್ ರೆಹಮನ್ ಬಿದರಕುಂದಿ, ದಸ್ತಗೀರ್ ಕಲಹಳ್ಳಿ, ಇಬ್ರಾಹಿಮ್ ಸಾಹೇಬ್ ಕೋಟ, ಮುಜ್ಹಫರ್ ಹುಸೈನ್ ಪಿರಿಯಾಪಟ್ಟಣ, ಜಾಕೀರ್ ಹುಸೇನ್, ಎಸ್ ಕೆ ಇಬ್ರಾಹಿಮ್, ಲೋಹಾನಿ ಮಳಗಿ, ಅಶ್ರಫ್ ಕುಂದಾಪುರ, ಉಸ್ಮಾನ್ ಹೈಕಾಡಿ, ಹಕೀಮ್ ತೀರ್ಥಹಳ್ಳಿ, ಇಕ್ಬಾಲ್ ಹಾಲಾಡಿ ಮತ್ತು ಸ್ಥಳೀಯ ಮುಖಂಡರಾದ ಅಭಿಗೌಡ ಮತ್ತು ಕಲಿಮುಲ್ಲಾ ನಾಗಮಂಗಲ ಉಪಸ್ಥಿತರಿದ್ದರು.

Exit mobile version