Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲೆಯ ಶಾಸಕರುಗಳ ನಿಷ್ಕ್ರೀಯತೆಯೇ ಕಟ್ಟಡ ಸಾಮಾಗ್ರಿಗಳ ಪೂರೈಕೆ ಸಮಸ್ಯೆಗಳಿಗೆ ಕಾರಣ: ಕೆ. ವಿಕಾಸ್ ಹೆಗ್ಡೆ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜಿಲ್ಲೆಯ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಸಮಸ್ಯೆಗೆ ಇಲ್ಲಿಯ ಐದು ಜನ ಬಿಜೆಪಿ ಶಾಸಕರ ನಿಷ್ಕ್ರೀಯತೆಯೇ ಕಾರಣ. ಜನ ಶಾಸಕರುಗಳನ್ನು ಆಯ್ಕೆ ಮಾಡಿದ್ದು ಅವರ ಬೇಡಿಕೆ, ಆಗ್ರಹ, ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಹಾಕಿ, ಶೂನ್ಯ ವೇಳೆ, ನಿಯಮ 330ರ ಅಡಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿಕೊಡಲು. ಆದರೆ ಜಿಲ್ಲೆಯ ಶಾಸಕರುಗಳು ಪ್ರಾಮಾಣಿಕ ಪ್ರಯತ್ನ ಮಾಡುವುದನ್ನು ಬಿಟ್ಟು ಧರಣಿ ನಿರತರ ಜೊತೆ ಕೂತು ಫೋಟೋ ತೆಗೆಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

ಮರಳು, ಜಲ್ಲಿ, ಕಲ್ಲು, ಮಣ್ಣು, ಚಿಪ್ಪು ಮೊದಲಾದವುಗಳ ಸಾಗಣಿಕೆಗೆ ಕಾನೂನು ಮೀರಿ ಅವಕಾಶ ನೀಡಲು ಜಿಲ್ಲಾಡಳಿತ, ಪೊಲೀಸ್ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೂ ಸಾಧ್ಯವಿಲ್ಲ. ಇವರ ಕೆಲಸ ಶಾಸಕಾಂಗ ರೂಪಿಸಿದ ಕಾನೂನುಗಳನ್ನು ಪಾಲಿಸುವುದು. ಕರಾವಳಿ ಜಿಲ್ಲೆಯ ಬಹುವರ್ಷಗಳ ಗಣಿ ಮತ್ತು ಖನಿಜ ಕಾಯಿದೆಯಲ್ಲಿನ ಸಡಿಲೀಕರಣದ ಬೇಡಿಕೆಗೆ ಸ್ಪಂದಿಸಬೇಕಾದ ಶಾಸನ ಸಭೆಯ ಸದಸ್ಯರುಗಳ ನಿಷ್ಕ್ರೀಯತೆಯೇ ಇಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣ.

ನಿಜವಾಗಿಯೂ ಚುನಾಯಿತ ಜನಪ್ರತಿನಿಧಿಗಳಿಗೆ ಜನರ ಸಮಸ್ಯೆಗಳ ಪರಿಹಾರಕ್ಕೆ ಮನಸ್ಸು ಇದ್ದಿದ್ದರೆ ಕಳೆದ ಭಾರೀ ಬಿಜೆಪಿ ಸರ್ಕಾರ ಇರುವಾಗ ಗಣಿ ಮತ್ತು ಖನಿಜ ಕಾಯಿದೆಯಲ್ಲಿ ಸುಧಾರಣೆ ತರಬೇಕಿತ್ತು. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಸಿ ಆರ್ ಝಡ್ ಮರಳುಗಾರಿಕೆಯ ನೀತಿಯಲ್ಲಿನ ಸಡಲೀಕರಣದ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಅದನ್ನು ಬಿಟ್ಟು ಅಧಿಕಾರಿಗಳ ಬಳಿ ತಪ್ಪು ಮಾಡಿಸುವ ಇವರ ಮನಸ್ಥಿತಿ ಸಂವಿಧಾನ ವಿರೋಧಿ ನಿಲುವಾಗಿದೆ.

ಹಿಂದೆ ರೈತ ಭಾವಿ ತೋಡಲು, ಕೃಷಿ ಭೂಮಿ ಸಮತಟ್ಟು ಮಾಡಲು ಹಿರಿಯ ಭೂ ವಿಜ್ಞಾನಿಯ ಅನುಮತಿಯ ಅಗತ್ಯತೆವಿತ್ತು. ಆದರೆ ಇಂದು ಆ ನಿಯಮಗಳಲ್ಲಿ ಸಡಲೀಕರಣವಾಗಿದೆ. ಹಿಂದೆ ಸರ್ಕಾರ ಶೇಂದಿ ನಿಷೇಧ ಮಾಡಿದಾಗ ಈ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಉದಾಹರಣೆಯೂ ನಮ್ಮ ಮುಂದಿದೆ. ಇನ್ನಾದರೂ ಜಿಲ್ಲೆಯ ಶಾಸಕರುಗಳು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದನ್ನು ಬಿಟ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Exit mobile version