Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಬನ್ಸ್ ರಾಘು ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.09:
ನಗರದಲ್ಲಿ ಅ.01ರಂದು ರಾಘವೇಂದ್ರ ಶೇರುಗಾರ್ (42) ಯಾನೆ ಬನ್ಸ್ ರಾಘು ಕೊಲೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳಾದ ಶಫಿವುಲ್ಲ ಅಲಿಯಾಸ್ ಆಟೋ ಶಫಿ (40), ಮಹಮ್ಮದ್ ಇಮ್ರಾನ್ (43) ಎಂಬಿಬ್ಬರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.

ಶಿವಮೊಗ್ಗ ಜಿಲ್ಲೆಯವರಾದ ಶಫಿವುಲ್ಲ ಹಾಗೂ ಮಹಮ್ಮದ್ ಇಮ್ರಾನ್ ಎಂಬಾತನ್ನು ಅ.5ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದು ಅ.6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮೃತ ರಾಘವೇಂದ್ರ ಶೇರಿಗಾರ್ ಅಲಿಯಾಸ್ ಬನ್ಸ್ ರಾಘು ಅವರ ಕಾರಿಗೆ ಆರೋಪಿಗಳ ಕಾರು ತಾಕಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿ ಶಫಿವುಲ್ಲಾ ಚಾಕುವಿನಿಂದ ರಾಘವೇಂದ್ರ ಶೇರಿಗಾರ್ ಎಂಬುವವರಿಗೆ ಇರಿದಿದ್ದು ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಆರೋಪಿ ಶಾಫಿವುಲ್ಲಾಗೆ ಜುಗಾರಿ ಆಡುವ ಚಟವಿದ್ದು ಆತನ ಸ್ನೇಹಿತ ಇಮ್ರಾನ್ನನ್ನು ಜೊತೆಯಲ್ಲಿ ಕರೆದುಕೊಂಡು ಕಾರಿನಲ್ಲಿ ಬೇರೆ ಕಡೆ ಹೊಗಿ ಜುಗಾರಿ ಆಡುತ್ತಿದ್ದ. ಅ.1ರಂದು ಕುಂದಾಪುರದಿಂದ ಮರಳಿ ಶಿವಮೊಗ್ಗಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ. ಶಫಿವುಲ್ಲಾ ಬಳಿ ಶಿವಮೊಗ್ಗದಲ್ಲಿ ನಾಲ್ಕು ಆಟೋಗಳಿದ್ದು ಇಮ್ರಾನ್ ಅದರಲ್ಲಿ ಒಂದು ಆಟೋದ ಚಾಲಕನಾಗಿದ್ದ.

ಉಡುಪಿ ಎಸ್ಪಿ ಡಾ. ಅರುಣ್ ಕೆ., ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ದಲಿಂಗಪ್ಪ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಮಾರ್ಗದರ್ಶನದಲ್ಲಿ ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸರ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು.

ಕುಂದಾಪುರ ಪೊಲೀಸ್ ಠಾಣೆ ನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಕುಂದಾಪುರ ಠಾಣೆಯ ಪಿಎಸ್ಐ ವಿನಯ ಕೊರ್ಲಹಳ್ಳಿ, ಅಪರಾಧ ವಿಭಾಗದ ಪಿಎಸ್ಐ ಪ್ರಸಾದ್ ಕುಮಾರ್, ಶಂಕರನಾರಾಯಣ ಠಾಣೆಯ ಪಿಎಸ್ಐ ಮಧು. ಬಿ.ಇ ಹಾಗೂ ಸಿಬ್ಬಂದಿಗಳಾದ ಮಧು ಸೂದನ್, ರಾಮ, ಶ್ರೀಧರ್, ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ ಆರೋಪಿಗಳನ್ನು ಬಂಧಿಸಿದ್ದರು.

Exit mobile version