Kundapra.com ಕುಂದಾಪ್ರ ಡಾಟ್ ಕಾಂ

ಶಿರೂರು ದಲಿತ ಕುಟುಂಬಕ್ಕೆ ತೊಂದರೆಯಾದ ಪ್ರಕರಣ: ದಲಿತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ

ಬೈಂದೂರು: ತಾಲೂಕಿನ ಶಿರೂರು ಗ್ರಾಮದ ಮೆಲ್ಪಂಕ್ತಿಯ ಸರ್ವೇ ನಂ. 325ರ ರಾಮನಾಥ್ ಭಟ್ ಇವರಿಗೆ ಸೇರಿದ ಪಟ್ಟಾ ಸ್ಥಳದಲ್ಲಿ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡಿಕೊಂಡು ಬಂದ ದಲಿತ ಕುಟುಂಬಗಳಿಗೆ ಕೆಲ ದಿನಗಳ ಹಿಂದೆ ಮಣ್ಣು ತೆಗೆದ ಪರಿಣಾಮವಾಗಿ ತೊಂದರೆಯಾಗಿದೆ ಎಂದು ಅನೇಕ ಹೋರಾಟಗಳು ನಡೆದಿದೆ. ಇದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ದಲಿತ ಕುಟುಂಬಗಳಿಗೆ ಶಾಶ್ವತ ನ್ಯಾಯ ಕಲ್ಪಿಸುವ ಸಲುವಾಗಿ ಪಟ್ಟಾ ಸ್ಥಳವನ್ನು ದಲಿತರ ಹೆಸರಿಗೆ ಪಹಣಿ ದಾಖಲಿಸಿ ಸಂಪೂರ್ಣ ನ್ಯಾಯ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ಈಗ ಬೈಂದೂರು ವಕೀಲರ ಸಂಘದ ಹಾಲಿ ಕಾರ್ಯದರ್ಶಿಯಾಗಿರುವ ಪ್ರಶಾಂತ್ ಪೂಜಾರಿ ಅವರು ತಿಳಿಸಿರುವುದಾಗಿ ಶ್ರೀಧರ್ ದೇವಾಡಿಗ ಹೇನಬೇರು ಹೇಳಿದ್ದಾರೆ.

ವಕೀಲ ಪ್ರಶಾಂತ ಪೂಜಾರಿ ಅವರ ಮುಂದಾಳತ್ವದಲ್ಲಿ ಪಟ್ಟಾದಾರರು ಹಾಗೂ ದಲಿತ ಕುಟುಂಬದವರು ಇಬ್ಬರಿಗೂ ತಿಳಿ ಹೇಳಿ, ದಲಿತ ಕುಟುಂಬಗಳಿಗೆ ಶಾಶ್ವತ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ದಲಿತ ಮುಖಂಡರೊಂದಿಗೆ ಮತ್ತು ಸಂತ್ರಸ್ತರೊಂದಿಗೆ ದಿ:31.10.2023 ರಂದು ತಮ್ಮ ಕಚೇರಿಯಲ್ಲಿ ಸಮಾಲೋಚನೆ ನಡೆಸಿ ದಲಿತ ಮನೆಗಳು ಇರುವ ರಾಮನಾಥ್ ಭಟ್ ಅವರ ಪಟ್ಟಾ ಸ್ಥಳವನ್ನು ದಲಿತರ ಹೆಸರಿಗೆ ಪಹಣಿ ದಾಖಲಿಸಿ ಸಂಪೂರ್ಣ ನ್ಯಾಯ ದೊರೆಯುವಂತೆ ದಲಿತ ಕುಟುಂಬಗಳಿಗೆ ಆಶ್ವಾಸನೆ ನೀಡಿರುತ್ತಾರೆ.

ಈ ವಿಚಾರದ ಬಗ್ಗೆ ಬೈಂದೂರು ತಾಲೂಕು ತಹಸೀಲ್ದಾರ್ ಶೋಭಾಲಕ್ಷ್ಮಿ ಮತ್ತು ಬೈಂದೂರು ಉಪನಿರೀಕ್ಷಿಕರಾದ ನಿರಂಜನ್ ಗೌಡರೊಂದಿಗೆ ಚರ್ಚಿಸಿ ಸಮಯೋಚಿತ ಪರಿಹಾರ ಕಲ್ಪಿಸುವುದಾಗಿ ಎಲ್ಲಾ ಮೆಲ್ಪಂಕ್ತಿಯ ದಲಿತ ಕುಟುಂಬಗಳಿಗೆ ವಾಗ್ದಾನ ನೀಡಿರುತ್ತಾರೆ ಹಾಗೂ ಅತ್ಯಂತ ಸೂಕ್ಷ್ಮ ಪ್ರಕರಣವನ್ನು ಸುಖಾoತ್ಯಗೊಳಿಸುವುದಾಗಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version