Kundapra.com ಕುಂದಾಪ್ರ ಡಾಟ್ ಕಾಂ

ಕನ್ನಡ ನನ್ನ ಇನ್ನೊಂದು ತಾಯಿ: ನೆದರ್ಲ್ಯಾಂಡ್‌ನ ಮಾರ್ಜೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ನಾನು ಕುಂದಾಪುರಕ್ಕೆ ಬಂದ ಮೊದಲಲ್ಲಿ ಹಿಂದಿ ಭಾಷೆ ಕಲಿಯಬೇಕೆಂದು ಬಯಸಿದ್ದೆ. ಆದರೆ ಇಲ್ಲಿ ಹಿಂದಿಗಿಂತ ಕನ್ನಡದ ಅಗತ್ಯತೆ ಹೆಚ್ಚಿದ್ದ ಕಾರಣ ಕನ್ನಡವನ್ನು ಕಲಿಯಲು ಮನಸ್ಸು ಮಾಡಿದೆ. ಅರ್ಥವಾಗದ ಮತ್ತು ಕಷ್ಟದ ಪದಗಳನ್ನು ಬರೆದಿಟ್ಟುಕೊಂಡು ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ವ್ಯಾಕರಣಬದ್ದವಾಗಿ ಮಾತನಾಡಲು ಆಗದಿದ್ದರೂ ಇನ್ನೊಬ್ಬರಿಗೆ ಅರ್ಥವಾಗುವಷ್ಟರ ಮಟ್ಟಿಗೆ ಮಾತನಾಡಲು ಕಲಿತಿದ್ದೇನೆ ಎಂಬ ಹೆಮ್ಮೆ ನನಗಿದೆ ಎಂದು ನೆದರ್ಲ್ಯಾಂಡಿನಿಂದ ಬಂದು ಕಳೆದ 15 ವರ್ಷಗಳಿಂದ ಮಾನಸಜ್ಯೋತಿ ವಿಶೇಷ ಚೇತನ ಶಾಲೆಯಲ್ಲಿ ಸೇವೆಸಲ್ಲಿಸುತ್ತಿರುವ ಮಾರ್ಜೆ ವ್ಯಾನ್ ಡೆನ್ ಬ್ರಾಂಡ್ ಹೇಳಿದರು.

ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹಮ್ಮಿಕೊಂಡಿರುವ ಕನ್ನಡ ರಾಜೋತ್ಸವ ಸಂಭ್ರಮದ ಕಾರ್ಯಕ್ರಮದಲ್ಲಿ ತನ್ನನ್ನು ಸನ್ಮಾನಿಸಿದ ಬಳಿಕ ಅವರು ಮಾತನಾಡಿ ಇದೊಂದು ಸುಂದರವಾದ ಮತ್ತು ಸುಲಭವಾದ ಭಾಷೆ ಆದ ಕಾರಣ ಕಲಿಯಲು ನನಗೇನು ಕಷ್ಟವೆನಿಸಲಿಲ್ಲ ಎಂದರು.

ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ರವರು ಮಾರ್ಜೆಯವರು ಕನ್ನಡ ಕಲಿತದ್ದು ಅವರಿಗಷ್ಟೇ ಹೆಮ್ಮೆಯಲ್ಲ ನಮಗೂ ಕೂಡ ಹೆಮ್ಮೆ ತರುವಂತದ್ದು. ಇದೊಂದು ಅರ್ಥಪೂರ್ಣವಾದ ಕನ್ನಡದ ಕಾರ್ಯಕ್ರಮ ಎಂದು ಕಲಾಕ್ಷೇತ್ರವನ್ನು ಕೊಂಡಾಡಿದರು. ಕನ್ನಡದ ಏಳಿಗೆಗಾಗಿ ಕೊಡುಗೆ ನೀಡಿದವರಲ್ಲಿ ವಿದೇಶಿಯರ ಪಾತ್ರವು ಬಹಳಷ್ಟಿದೆ ಎಂದು ಹಲವಾರು ದೃಷ್ಟಾಂತಗಳನ್ನು ಹೇಳುತ್ತ, ಕಾಲವಾದ ಹಿರಿಯ ಸಾಹಿತಿಗಳನ್ನು ನೆನಪಿಸಿಕೊಂಡು ತಾನೇ ಬರೆದ ಧೀರ್ಘವಾದ ಕವನವನ್ನು ವಾಚಿಸುತ್ತ ನೆರೆದ ಸಭಿಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಗೀತಗಾಯನ ತಂಡದ ಸದಸ್ಯರಿಂದ ನಾಡಗೀತೆ ಹಾಗೂ ಕನ್ನಡ ನುಡಿಯ ಬಗೆಗಿನ ಗೌರವವನ್ನು ಹೆಚ್ಚಿಸುವ ಹಿರಿಯ ಸಾಹಿತಿಗಳು ಬರೆದ ಗೀತೆಗಳನ್ನು ಹಾಡಲಾಯಿತು. ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್, ರೋಟರಿ ಸದಸ್ಯ ರವಿರಾಜ್ ಶೆಟ್ಟಿ, ಶೋಭಾ ಮದ್ಯಸ್ಥ, ಹೆಮ್ಮಾಡಿಯ ಜನತಾ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕರಾದ ಉದಯ್ ನಾಯ್ಕ್ ಉಪಸ್ಥಿತರಿದ್ದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ತ್ರಿವಿಕ್ರಮ ಪೈ ಧನ್ಯವಾದಗೈದರು.

Exit mobile version