Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಬ್ಬಡಿ ಪಂದ್ಯಾಟ ಸಮಾರೋಪ, ವಿಜೇತರಿಗೆ ಟ್ರೋಫಿ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ (ಉಡುಪಿ ವಲಯ) ಪುರುಷರ ಕಬಡ್ಡಿ ಪಂದ್ಯಾಟದ ಕಾರ್ಯಕ್ರಮದ ಸಮಾರೋಪ ಸಮಾರಂಭ ಗುರುವಾರ ಜರುಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಮಾತನಾಡಿ, ಬೈಂದೂರಿನ ಜನತೆ ಕಬಡ್ಡಿ ಕ್ರೀಡೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅಲ್ಲದೆ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ. ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಬೆಳಸಲು ಕ್ರೀಡೆ ಅತ್ಯವಶ್ಯಕ ಎಂದು ತಿಳಿಸಿದರು.

ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀಮುತ್ತಯ್ಯ ಪೂಜಾರಿ ಅವರು ಮಾತನಾಡಿ ತಾವು ಪದವಿ ಹಂತದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸಂದರ್ಭ ಹಾಗೂ 30 ವರ್ಷಗಳ ಹಿಂದೆ ಬೈಂದೂರಿನ ಕಾಲೇಜಿನಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದ ಸಂದರ್ಭವನ್ನು ನೆನೆಸಿಕೊಂಡರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಅವರು ಮಾತನಾಡಿ ಈ ಒಂದು ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಜೆರಾಲ್ಡ್ ಸಂತೋಷ ಡಿʼಸೋಜಾ, ಕಬಡ್ಡಿ ಪಂದ್ಯಾಟದ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ತಿತವಾಗಿ ಸಂಘಟಿಸಿರುವ ಕುರಿತು ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ನಿರ್ದೇಶಕರಾದ ರೋಷನ್ ಕುಮಾರ್ ಶೆಟ್ಟಿ, ಅಜ್ಜರಕಾಡು ಪಾಟ್ಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ, ಪಂದ್ಯದ ಪರಿವೀಕ್ಷಕ ರಾಮಚಂದ್ರ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ ಎಲ್. ಕಾಲೇಜಿನ ಕ್ರೀಡಾ ಉಪನ್ಯಾಸಕರಾದ ಪ್ರಭಾಕರ್ ಉಪಸ್ಥಿತರಿದ್ದರು.

ಉಪನ್ಯಾಸಕಿ ಡಾ. ಲತಾ ಪೂಜಾರಿ ಸ್ವಾಗತಿಸಿದರು. ಕ್ರೀಡಾ ಸಂಚಾಲಕರಾದ ಮೋಹನ ಕುಮಾರ್ ವಂದಿಸಿದರು. ಉಪನ್ಯಾಸಕರಾದ ನವೀನ್ ಹೆಚ್.ಜೆ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಒಟ್ಟು ಉಡುಪಿ ವಲಯದ 23 ತಂಡಗಳು ಪಾಲ್ಗೊಂಡಿದ್ದು, ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆ, ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ತೃತೀಯ ಸ್ಥಾನವನ್ನು ಲಕ್ಷ್ಮೀ ಸೋಮ ಬಂಗೇರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚತುರ್ಥ ಸ್ಥಾನವನ್ನು ಶಾರಾದ ಕಾಲೇಜು ಬಸ್ರೂರು ಇಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡರು.

ವಿಜೇತ ತಂಡಗಳಿಗೆ ಅತಿಥಿಗಳು ಟ್ರೋಫಿಯನ್ನು ವಿತರಿಸಿದರು.

Exit mobile version