ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯ ವಿಶಿಷ್ಟ, ವಿಶೇಷ ಪರಂಪರೆ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಹೆಸರಿನಲ್ಲಿ ನೀಡುವ 2023-24ರ ಸಾಲಿನ ಪ್ರಶಸ್ತಿಯನ್ನು ಯಕ್ಷಗಾನದ ಹಿರಿಯ ಮದ್ದಲೆ ಕಲಾವಿದ ಏಳ್ಜಿತ್ ಸದಾನಂದ ಪ್ರಭು ಇವರಿಗೆ ನೀಡಲು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ.
ತೆಕ್ಕಟ್ಟೆ ರಾಮಚಂದ್ರ ಪ್ರಭು ಹಾಗೂ ಸರಸ್ವತಿ ದಂಪತಿಗಳ ಸುಪುತ್ರರಾಗಿ 1935ರಲ್ಲಿ ಜನಿಸಿದ ಶ್ರೀಯುತರು ಏಳ್ಜಿತ್ ನಲ್ಲಿ 5ನೇ ತರಗತಿಯ ವರೆಗೆ ಹಾಗೂ ಬೈಂದೂರು ಹೈಸ್ಕೂಲಿನಲ್ಲಿ 8ನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಬಾಲ್ಯದಿಂದಲೇ ಯಕ್ಷಗಾನದ ಗೀಳು ತಾಗಿಸಿಕೊಂಡು ತಮ್ಮ ದೊಡ್ಡಪ್ಪನವರಾದ ದಾಸಪ್ಪ ಪ್ರಭುಗಳಲ್ಲಿ ಮದ್ದಲೆಯ ಪ್ರಾಥಮಿಕ ಅಭ್ಯಾಸ ಪಡೆದರು. ನಂತರ ಗುರು ವೀರಭದ್ರ ನಾಯ್ಕ ರ ಯಜಮಾನಿಕೆಯಲ್ಲಿ ಪ್ರಸಿದ್ಧ ಮೃದಂಗ ವಾದಕರಾದ ಬೇಳಂಜೆ ತಿಮ್ಮಪ್ಪ ನಾಯ್ಕರ ಒಡನಾಟ ಮಾಡಿ ಮದ್ದಲೆ ಹಾಗೂ ಚಂಡೆ ಎರಡನ್ನೂ ಕಲಿತುಕೊಂಡರು. ತದನಂತರ ಕೊಲ್ಲೂರು ಮೇಳ, ಚಿಕ್ಕ ಹೊನ್ನೇಸರ ಮೇಳ, ಕೊಡವೂರು ಮೇಳಗಲ್ಲಿ ತಮ್ಮ ಸೇವೆ ಸಲ್ಲಿಸಿದರು. ಮರವಂತೆ ನರಸಿಂಹ ದಾಸರು ಹಾಗೂ ಶ್ರೀನಿವಾಸ ದಾಸರ ಒಟ್ಟಿಗೆ ಸೇರಿ ತಿರುಗಾಟ ನಡೆಸಿದರು.
ನವರಾತ್ರಿಯಲ್ಲಿ ಹೂವಿನಕೋಲು ಹಾಗೂ ಚಿಕ್ಕ ಮೇಳಗಳಲ್ಲಿ ಮದ್ದಲೆ ಹಿಡಿದು ಊರೂರು ತಿರುಗಿದರು. ತನಮಧ್ಯೆ ಏಳ್ಜಿತ್ ಅಂಚೆ ಕಛೇರಿಯಲ್ಲಿ ಇ.ಡಿ.ಡಿ.ಪಿಯಾಗಿ ಸೇರ್ಪಡೆಗೊಂಡರು. ಇಲಾಖೆಯವರು ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಪೋಸ್ಟ್ಮೆನ್ ಆಗಿ ಭಡ್ತಿ ಹೊಂದಿ ಕುಂದಾಪುರ, ತೆಕ್ಕಟ್ಟೆ, ಕೋಟೇಶ್ವರ, ಬೈಂದೂರು, ಶಿರೂರು ಹಾಗೂ ಕೊಲ್ಲೂರು ಮುಂತಾದ ಕಡೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದರು. ಮನೆಯಲ್ಲಿನ ಸಮಸ್ಯೆಯಿಂದ ಕೆಲಸಕ್ಕೆ ರಾಜಿನಾಮೆ ನೀಡಿ ಮಾರಣಕಟ್ಟೆ, ಕಮಲಶಿಲೆ, ಅಮೃತೇಶ್ವರಿ, ಬಗ್ವಾಡಿ, ನಾಗರಕೊಡಿಗೆ, ಗೋಳಿಗರಡಿ,ಬೈಂದೂರು, ಕಳವಾಡಿ ಮೇಳಗಳಲ್ಲಿ ಮದ್ದಲೆಗಾರರಾಗಿ ತಮ್ಮ ಪ್ರತಿಭೆ ತೋರಿಸಿದರು. ಶ್ರೀಯುತರಿಗೆ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು ಇದರಲ್ಲೂ ತಮ್ಮ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿತು. ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪತಿ ಆಷಾಢ ಏಕಾದಶಿಯಂದು ನಡೆಯುವ ತಾಳಮದ್ದಲೆಯಲ್ಲಿ ಮದ್ದಲೆಗಾರರಾಗಿ ತಮ್ಮ ಸಹಕಾರ ನೀಡುತ್ತಾ ಬಂದಿದ್ದಾರೆ. ಒಟ್ಟು 30 ವರ್ಷಗಳ ಸುಧೀರ್ಘ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಒಂಭತ್ತನೇ ವಾರ್ಷಿಕೋತ್ಸವವು 2024ರ ಜನವರಿ 28ನೇ ತಾರೀಕಿನಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಲಿದ್ದು ಆ ಸಂದರ್ಭದಲ್ಲಿ ಭಾಗವಹಿಸುವ ವಿಶೇಷ ಗಣ್ಯರಿಂದ ಈ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

