Kundapra.com ಕುಂದಾಪ್ರ ಡಾಟ್ ಕಾಂ

ಇನೋವಾಗೆ ಇನ್ಸುಲೇಟರ್ ವಾಹನ ಡಿಕ್ಕಿ: ಓರ್ವ ಯುವಕ ಮೃತ

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ತಾಲೂಕಿನ ಬೀಜಾಡಿ ಬೈಪಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-66 ಇನೋವಾ ಕಾರಿಗೆ ಇನ್ಸುಲೇಟರ್ ಲಾರಿ ಡಿಕ್ಕಿಯಾದ ಪರಿಣಾಮ ಇನೋವಾದಲ್ಲಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ಸುಮಾರಿಗೆ ನಡೆದಿದೆ. ಕ್ಲಬ್ ಮಹೇಂದ್ರ ಸಂಸ್ಥೆಯ ಉದ್ಯೋಗಿ ಬಾಲಕೃಷ್ಣ (26) ಮೃತ ದುರ್ದೈವಿ.

ಘಟನೆಯ ವಿವರ:
ಕಾರವಾರ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮೀನು ಸಾಗಾಟದ ಇನ್ಸುಲೇಟರ್ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ಬೀಜಾಡಿ ಬೈಪಾಸ್ ಬಳಿಯ ಡಿವೈಡರ್ ಡಿಕ್ಕಿ ಹೊಡೆದು ಪಕ್ಕದ ರಸ್ತೆಯಲ್ಲಿ ಕುಂದಾಪುರ ಕಡೆಗೆ ತೆರಳುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ಇನೋವಾ ಕಾರು ಹಾಗೂ ಲಾರಿ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇನೋವಾದಲ್ಲಿದ್ದ ಬಾಲಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟರೇ, ಮಣಿಕಂಠ ಹಾಗೂ ಅರುಣ್ ಎಂಬುವವರಿಗೆ ಗಾಯಗಳಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕುಂದಾಪುರದಲ್ಲಿ ಕಂಪೆನಿಯ ಮೀಟಿಂಗ್ ಇದ್ದ ಕಾರಣ ಆರು ಮಂದಿ ಬೆಂಗಳೂರಿನಿಂದ ಆಗಮಿಸಿದ್ದರು. ಮೀಟಿಂಗ್ ಬಳಿಕ ಮೂವರು ಆನೆಗುಡ್ಡೆ ದೇವಳಕ್ಕೆ ತೆರಳಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಅಪಘಾತದಿಂದಾಗಿ ಒಂದು ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ತೊಡಕಾಯಿತು. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Kundapra.com

Exit mobile version