Kundapra.com ಕುಂದಾಪ್ರ ಡಾಟ್ ಕಾಂ

ಯಂತ್ರ ಜಗತ್ತಿನಿಂದ ಜೀವ ಜಗತ್ತಿನ ನಾಶ: ವಿಮರ್ಶಕ ಶ್ರೀಧರ ಬಳಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಯಂತ್ರ ಜಗತ್ತು ಈಗ ಮನುಷ್ಯನನ್ನು ಜೀವ ಜಗತ್ತನಿಂದ ದೂರ ಸೆಳೆಯುತ್ತಿದೆ ಮತ್ತು ಜೀವ ಜಗತ್ತನ್ನು ನಾಶಮಾಡುತ್ತ್ತಿದೆ ಎಂದು ಕತೆ, ಕಾದಂಬರಿಕಾರ, ವಿಮರ್ಶಕ ಶ್ರೀಧರ ಬಳಗಾರ ಹೇಳಿದರು.

ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆ, ಹಳೆ ವಿದ್ಯಾರ್ಥಿ ಸಂಘ, ಆಸರೆ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಯೋಗೀಂದ್ರ ಮರವಂತೆ ಅವರ ’ಏರೋ ಪುರಾಣ-ವಿಮಾನ ಲೋಕದ ಅನುಭವ, ಅಚ್ಚರಿ’ ಪ್ರಬಂಧ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಈಗ ವೈದ್ಯರು, ವಿಜ್ಞಾನಿಗಳು ಮನುಷ್ಯನನ್ನು ಯಂತ್ರವೆಂದು ಪರಿಗಣಿಸುತ್ತಿರುವಾಗ ವಿಮಾನ ತಂತ್ರಜ್ಞ ಆಗಿರುವ ಯೋಗೀಂದ್ರ ಈ ಕೃತಿಯಲ್ಲಿ ವಿಮಾನಗಳನ್ನು ಜೀವಿಗಳಾಗಿ ಬಿಂಬಿಸುತ್ತಾರೆ. ಜೀವಿಗಳಿಗಿದ್ದಂತೆ ಅವುಗಳಿಗೆ ಹುಟ್ಟು, ಬಾಲ್ಯ, ಯೌವನ, ವೃದ್ಧಾಪ್ಯ, ಸಾವು ಇದೆ. ಅವುಗಳ ಜೀವಯಾನ ಅವುಗಳದ್ದೇ ಆದ ಸ್ಮಶಾನದಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದನ್ನು ವಿವಿಧ ರೂಪಕಗಳ ಮೂಲಕ ಚಿತ್ರಿಸುತ್ತಾರೆ. ವಿಮಾನಗಳ ತಾಂತ್ರಿಕ ಪರಿಚಯ ನೀಡುವ ಕೃತಿಗಳು ಕನ್ನಡದಲ್ಲಿ ಬಂದಿರಬಹುದು. ಆದರೆ ಯೋಗೀಂದ್ರರು ವಿಮಾನಕ್ಕೆ ವ್ಯಕ್ತಿತ್ವ ಆರೋಪಿಸುವ ಮೂಲಕ ವಿಶಿಷ್ಟತೆ ಮೆರೆದಿದ್ದಾರೆ.. ’ಏರೋ ಪುರಾಣ’ದ ಮೂಲಕ ತಮ್ಮ ನಾಲ್ಕನೆ ಪ್ರಬಂಧ ಸಂಕಲನ ಹೊರತಂದ ಯೋಗೀಂದ್ರ ಅವರು ಸ್ವಂತಿಕೆಯ ಮತ್ತು ಲವಲವಿಕೆಯ ಭಾಷೆ ಹಾಗೂ ಆಕರ್ಷಕ ನಿರೂಪಣಾ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಓದುಗರು ಅವರಿಂದ ಇನ್ನಷ್ಟು ಮಹತ್ವದ ಕೃತಿಗಳನ್ನು ನಿರೀಕ್ಷಿಸಬಹುದು ಎಂದರು.

ಕೃತಿ ಪರಿಚಯ ಮಾಡಿದ ಲೇಖಕ ರಾಜೀವ ನಾಯ್ಕ್ ಕೋನಳ್ಳಿ ಅವರು ’ಏರೋ ಪುರಾಣ’ ಹೇಗೆ ಕನ್ನಡದ ಅನನ್ಯ ಕೃತಿಯಾಗಿದೆ ಎನ್ನುವುದನ್ನು ಪುಸ್ತಕದಿಂದ ಆಯ್ದ ವಿವಿಧ ಉದಾಹರಣೆಗಳ ಮೂಲಕ ನಿರೂಪಿಸಿದರು. ಕೃತಿಯನ್ನು ಬೆಂಗಳೂರಿನ ಪ್ರಿಸಮ್ ಬುಕ್ಸ್ ಪ್ರಕಟಿಸಿದೆ.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಬಿ. ಬಿ. ಹೆಗ್ಡೆ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಮಾತನಾಡಿ ಈ ಕೃತಿಯನ್ನು ಯುವ ಓದುಗರು ಓದಬೇಕೆಂಬ ದೃಷ್ಟಿಯಿಂದ ಯಾವುದಾದರೊಂದು ಪ್ರಬಂಧವನ್ನು ಪದವಿ ತರಗತಿಯ ಪಠ್ಯಪುಸ್ತಕದಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು ಎಂದರು.

ಆಸರೆ ಟ್ರಸ್ಟ್ನ ದಯಾನಂದ ಬಳೆಗಾರ್ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ ವಂದಿಸಿದರು. ಸಾಧನಾ ಸದಸ್ಯ ಜತೀಂದ್ರ ಮರವಂತೆ ನಿರೂಪಿಸಿದರು.

Exit mobile version