Kundapra.com ಕುಂದಾಪ್ರ ಡಾಟ್ ಕಾಂ

ಜನವರಿ 14ಕ್ಕೆ ಇನಿದನಿ – ಕುಂದಾಪುರದಲ್ಲಿ ಸಂಗೀತದ ರಸದೌತಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ವಿನೂತನ ಬಗೆಯ ಸಂಗೀತ ರಸಮಂಜರಿಯ ಮೂಲಕ ಸಂಗೀತ ಪ್ರೀಯರ ಮನಗೆದ್ದ ಇನಿದನಿ ಕಾರ್ಯಕ್ರಮ ಜನವರಿ 14ರ ಸಂಜೆ 6 ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಆವರಣದ ಬಯಲು ರಂಗಮಂದಿರದಲ್ಲಿ ಜರುಗಲಿದ್ದು, ಪ್ರತಿಭಾರಿಯಂತೆಯೇ ಹಲವು ವಿಶೇಷತೆಗಳಿಂದ ಕೂಡಿರಲಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು.

ಅವರು ಮಂಗಳವಾರ ಕುಂದಾಪುರ ಪ್ರೆಸ್‌ಕ್ಲಬ್‌ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಭಾರಿಯ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಗಾಯಕ/ಗಾಯಕಿಯರಾದ ಅಜೇಯ್ ವಾರಿಯರ್, ಮೋಹನಕೃಷ್ಣ, ಶಶಿಕಲಾ ಸುನೀಲ್, ಸಮನ್ವಿತಾ ಶರ್ಮ, ಭಾಗವಹಿಸಲಿದ್ದಾರೆ. ಇವರೊಂದಿಗೆ ಮಂಗಳೂರಿನ ವೈ ಎನ್. ರವೀಂದ್ರ, ಸ್ಥಳೀಯರಾದ ಅಶೋಕ ಸಾರಂಗ್, ಯುವ ಪ್ರತಿಭೆ ಧಾರಿಣಿ ಕುಂದಾಪುರ, ಪ್ರಾಪ್ತಿ ಹೆಗ್ಡೆ ಹಾಗೂ ಕಮಲ್ ಕಿಶೋರ್ ಕುಂದಾಪುರ ಭಾಗವಹಿಸಲಿದ್ದು, ಹಿಮ್ಮೇಳದಲ್ಲಿ ರಾಜೇಶ್ ಭಾಗವತ್-ತಬಲಾ, ವಾಮನ್ ಕಾರ್ಕಳ-ಪ್ಯಾಡ್ ಮತ್ತು ಡ್ರಮ್ಸ್, ಗಣೇಶ್ ನವಗಿರಿ-ಕಾಂಗೋ, ಭಾಸ್ಕರ ಕುಂಬ್ಳೆ- ಡೋಲಕ್, ಶಿಜಿಮೂನ್ ಕ್ಯಾಲಿಕಟ್ ಹಾಗೂ ದೀಪಕ್ ಶಿವಮೊಗ್ಗ-ಕೀಬೋರ್ಡ್, ವರುಣ್-ಕೊಳಲು, ಸುಮುಖ್ ಆಚಾರ್ಯ-ಸಿತಾರ್, ಮೆಲ್ವಿನ್-ಟ್ರಂಪೆಟ್, ಟೋನಿ ಡಿ’ಸಿಲ್ವ ಬೇಸ್ ಗಿಟಾರ್ ಮತ್ತು ಮಂಗಳೂರಿನ ರಾಜ್ ಗೋಪಾಲ ಆಚಾರ್ಯ- ಗಿಟಾರ್ ನುಡಿಸಲಿದ್ದು ತಂಡದ ನೇತೃತ್ವ ವಹಿಸಲಿದ್ದಾರೆ.

2010ರಲ್ಲಿ ಇನಿದನಿ ಎಂಬ ಹೆಸರಿನೊಂದಿಗೆ ಸಂಗೀತ ರಸಮಂಜರಿಯೊಂದು ವಿಭಿನ್ನ ಶೈಲಿಯೊಂದಿಗೆ ಕುಂದಾಪುರಕ್ಕೆ ಪರಿಚಯಿಸಲ್ಪಟ್ಟಿತ್ತು. ಅದರಲ್ಲಿ 70-80 ರ ದಶಕದ ಕನ್ನಡ ಚಲನಚಿತ್ರದ ಹಾಡುಗಳನ್ನಷ್ಟೇ ಹಾಡಿಸಲಾಗುತ್ತಿತ್ತು. ಸಭಾ ಶಿಸ್ತು, ಸಮಯ ಪಾಲನೆ, ಅಚ್ಚುಕಟ್ಟಾದ ಆಯೋಜನೆ, ಪರಿಶುದ್ಧವಾದ ಸಂಗೀತ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇನಿದನಿಯಿಂದ ಮನಸೂರೆಗೊಂಡ ಪ್ರೇಕ್ಷಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಯಿತು. 2010 ರಲ್ಲಿ 150 ಮಂದಿ ಪ್ರೇಕ್ಷಕರಿದ್ದ ಇನಿದನಿಗೆ ಇದೀಗ 8 ಸಾವಿರಕ್ಕೂ ಅಧಿಕ ಮಂದಿ ಕೇಳುಗರು ಸೇರುತ್ತಾರೆ. ಮುಂದಿನ ವರ್ಷದ ಇನಿದನಿಗಾಗಿ ಕಾತುರದಿಂದ ಕಾಯುತ್ತಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಲಾಕ್ಷೇತ್ರ- ಕುಂದಾಪುರ ಟ್ರಸ್ಟ್ ಇನಿದನಿ ಕಾರ್ಯಕ್ರಮದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಕಾಳಜಿಯ ಪ್ರತಿರೂಪವಾದ ಕಲಾಕ್ಷೇತ್ರ ಸಂಸ್ಥೆಯು ಈಜು ತರಬೇತಿ, ಸುಗಮ ಸಂಗೀತ ತರಬೇತಿ, ಕನ್ನಡ ರಾಜ್ಯೋತ್ಸವ ಆಚರಣೆ, ವಿಚಾರ ಸಂಕಿರಣ, ಚಲನಚಿತ್ರ ಪ್ರದರ್ಶನ, ಯಕ್ಷಗಾನ, ತಾಳಮದ್ದಲೆ, ಹುಲಿವೇಷ ನೃತ್ಯ ಆಯೋಜನೆ, ಕುಂದಾಪ್ರ ಕನ್ನಡ ದಿನಾಚರಣೆ ಇತ್ಯಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕುಂದಾಪುರದ ಜನತೆಗೆ ನೀಡುತ್ತಲೇ ಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲಾಕ್ಷೇತ್ರ ಕುಂದಾಪುರದ ಕೆ.ಆರ್.‌ ನಾಯ್ಕ್‌, ಸನತ್ ಕುಮಾರ್ ರೈ, ರಾಜೇಶ್ ಕಾವೇರಿ ಉಪಸ್ಥಿತರಿದ್ದರು.

Exit mobile version