Kundapra.com ಕುಂದಾಪ್ರ ಡಾಟ್ ಕಾಂ

ರಾಮಾಯಣ ಮಹಾಭಾರತ ಭಾರತದ ಹಿರಿಮೆ ಸಾರಿದ ಕೃತಿಗಳು: ನರೇಂದ್ರ ಎಸ್ ಗಂಗೊಳ್ಳಿ

ಗಂಗೊಳ್ಳಿ: ರಾಮಾಯಣ ಮತ್ತು ಮಹಾಭಾರತ ಎರಡೂ ಕೃತಿಗಳೂ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಅತ್ಯಂತ ಅಮೋಘವಾಗಿ ಮತ್ತು ಸಮರ್ಥವಾಗಿ ಜಗತ್ತಿಗೆ ಸಾರಿ ಹೇಳಿದಂತಹ ಅತ್ಯಮೂಲ್ಯ ಕೃತಿಗಳು.ಅವುಗಳು ಭಾರತದ ಹೆಮ್ಮೆ. ಅವುಗಳನ್ನು ಸೃಷ್ಟಿಸಿದ ಮಹಾತ್ಮರನ್ನು ನಾವು ಸ್ಮರಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಎಂದು ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.

ಅವರು ವಾಲ್ಮೀಕಿ ಜಯಂತಿಯ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ವಾಲ್ಮೀಕಿ ಸ್ಮರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು. ನಾವು ವಾಲ್ಮೀಕಿ ಮಹರ್ಷಿಗಳ ಮೂಲಗಳ ಬಗೆಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರು ರಾಮಾಯಣದಲ್ಲಿ ಪ್ರತಿಪಾದಿಸಿರುವ ಉತ್ತಮ ವಿಚಾರಗಳ ಬಗೆಗೆ ಆಸಕ್ತಿಯನ್ನು ತೋರಬೇಕಿದೆ ಜೊತೆಗೆ ಆ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ‍್ಯ ನಿರ್ವಹಿಸಬೇಕಿದೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕಿವೆ.ವಾಲ್ಮೀಕಿಯನ್ನು ಒಂದು ನಿರ್ದಿಷ್ಠ ವರ್ಗಕ್ಕೆ ಅಥವಾ ಧರ್ಮಕ್ಕೆ ಸೇರಿದ ವ್ಯಕ್ತಿಯೆಂದು ಮಾತ್ರ ಪರಿಗಣಿಸುವುದು ನಾವು ಅವರಿಗೆ ಮಾಡುವ ಅವಮಾನ. ಎಂದು ಅವರು ಹೇಳಿದರು.

ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜಣಾಧಿಕಾರಿ ನಾರಾಯಣ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕರಾದ ರಾಘವೇಂದ್ರ ಭಟ್ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು. ಎನ್ನೆಸ್ಸೆಸ್ ವಿದ್ಯಾರ್ಥಿನಿ ಆಶ್ಮಿತಾ ಕಾರ‍್ಯಕ್ರಮ ನಿರೂಪಿಸಿದರು.ಸುಪ್ರೀತಾ ವಂದಿಸಿದರು.

Exit mobile version