Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ, ಗಂಗಾಧರ ಶೆಟ್ಟಿ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ, ಹೇರಿಕುದ್ರುವಿನ ಗಂಗಾಧರ ಶೆಟ್ಟಿ ಅವರು ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅತ್ಯಂತ ಆರೋಗ್ಯಪೂರ್ಣರಾಗಿದ್ದ ಅವರು ಮಾರ್ಚ್ 13ರಂದು ಬೆಳಿಗ್ಗೆ 6 ಗಂಟೆಗೆ ಹಠಾತ್ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ತತ್ ಕ್ಷಣವೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಲಾಗಿತ್ತು. ಆದರೆ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿರುವುದು ಸ್ಪಷ್ಟಗೊಂಡ ಹಿನ್ನಲೆಯಲ್ಲಿ ಆ ನಂತರದಲ್ಲಿ ಉಡುಪಿಯ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಕಾಂಗ್ರೆಸ್ ಪಕ್ಷದ ನಾಯಕರುಗಳಾದ ದಿವಂಗತ ಆಸ್ಕರ್ ಫರ್ನಾಂಡೀಸ್, ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ ಹೆಗ್ಡೆ ಮುಂತಾದ ನಾಯಕರುಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅವರು ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರ ಅನುಯಾಯಿಯಾಗಿದ್ದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಿದ್ದ ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಮಟ್ಟದಲ್ಲಿ ಉತ್ತಮವಾದ ಗೌರವವನ್ನು ಪಡೆದಿದ್ದಾರೆ. ಆ ನಿಟ್ಟಿನಲ್ಲಿ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗಷ್ಟೇ ಅವರನ್ನು ಉಡುಪಿ ಜಿಲ್ಲಾ ಕೆಡಿಪಿ ಸದಸ್ಯರನ್ನಾಗಿ ಕೂಡ ನೇಮಕಗೊಳಿಸಿತ್ತು.

ಅವಿವಾಹಿತರಾಗಿದ್ದ ಅವರು ಸಹೋದರರು, ಸಹೋದರಿಯರ ಸಹಿತ ಅಪಾರ ಬಂಧು ಭಾಂಧವರನ್ನು ಅಗಲಿದ್ದಾರೆ.

Exit mobile version