Kundapra.com ಕುಂದಾಪ್ರ ಡಾಟ್ ಕಾಂ

ಮಹಿಳೆಯೊಂದಿಗೆ ಸಿಕ್ಕಿಬಿದ್ದ ಪೊಲೀಸ್ ಪೇದೆಗೆ ಸ್ಥಳೀಯರಿಂದ ಧರ್ಮದೇಟು

ಬೈಂದೂರು: ಮಹಿಳೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾನೆಂದು ಆರೋಪಿಸಿ ಪೋಲೀಸ್ ಪೇದೆಯನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಪೋಲೀಸರಿಗೊಪ್ಪಿಸಿದ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಬಳಿ ನಡೆದಿದೆ. ಬೈಂದೂರು ಪೋಲೀಸ್ ಠಾಣೆಯ ಪೇದೆ ಕಿರಣ ಬಂಧಿತ ಆರೋಪಿ.

ಬೈಂದೂರು ಪೋಲೀಸ್ ಠಾಣೆಯಲ್ಲಿ ಸಮನ್ಸ್ ನೀಡುವ ಕರ್ತವ್ಯ ನಿರ್ವಹಿಸುತ್ತಿದ್ದ, ಪೇದೆ ಕಿರಣ ಎಂಬುವವನಿಗೆ ಕಳೆದ ಕೆಲವು ತಿಂಗಳ ಹಿಂದೆ ಯಾವುದೋ ಒಂದು ವ್ಯಾಜ್ಯ ಸಂಬಂಧಿ ಸಮನ್ಸ್ ನೀಡುವ ವಿಚಾರದಲ್ಲಿ ಶಿರೂರು ಹಡವಿನಕೋಣೆ ಎಂಬಲ್ಲಿನ ಮಹಿಳೆಯೊಂದಿಗೆ ಪರಿಚಯವಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಆಗಾಗ ಆಕೆಯ ಮನೆಗೆ ಬರುತ್ತಿದ್ದಾನೆ ಎನ್ನಲಾಗುತ್ತಿದೆ. ಇದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು, ಸೋಮವಾರ ಬೆಳಗ್ಗೆ ಗಂಟೆ 11 ರ ಸುಮಾರಿಗೆ ಪೇದೆ ಮಹಿಳೆಯ ಮನೆಗೆ ಪ್ರವೇಶಿಸಿದ್ದನ್ನು ಗಮನಿಸಿದ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿ ಪೇದೆ ಮಹಿಳೆಯೊಂದಿಗೆ ಮನೆಯ ಒಳಗೆ ಇರುವಾಗಲೇ ಹೊರಗಿನಿಂದ ಬಾಗಿಲಿಗೆ ಚೀಲಕ ಹಾಕಿದ್ದರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಸ್ಥಳಕ್ಕೆ ಠಾಣಾಧಿಕಾರಿ ಬರುವುದರೊಳಗೆ ಅದೇಗೋ ಮನೆಯಿಂದ ಹೊರಬಂದ ಕಿರಣ್ ಗೆ ಸಾರ್ವಜನಿಕರೇ ಗೂಸ ನೀಡಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಪೇದೆ ತಾನು ಪಾಸ್‌ಫೋರ್ಟ್ ವಿಚಾರಣೆಗಾಗಿ ಮಹಿಳೆಯ ಮನೆಗೆ ತೆರಳಿದ್ದೆ ಎಂದು ತಿಳಿಸಿದ್ದು, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ್ ಹಾಗೂ ಉಪನಿರೀಕ್ಷಕ ಸಂತೋಷ ಕಾಯ್ಕಿಣಿ ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಹಾಸನ ಮೂಲದವನಾದ ಪೇದೆ ಕಿರಣ ಕಳೆದ ನಾಲ್ಕು ವರ್ಷದಿಂದ ಬೈಂದೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.

Exit mobile version