ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು, ಮೇ 28: ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಕಾಲು ಜಾರಿ ಸೌಪರ್ಣಿಕ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಬಡಾಕೆರೆ ಗ್ರಾಮದ ಕುದ್ರುವಿನ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ತೊಪ್ಲು ನಿವಾಸಿ ಮುಡೂರ ಎಂಬುವರ ಮಗ ಮಂಜು ಮೊಗವೀರ (57) ಎಂದು ಗುರುತಿಸಲಾಗಿದೆ.
ಮಂಜು ಮೊಗವೀರ ಸಮುದ್ರ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ತೂಫಾನ್ ಇದ್ದ ಕಾರಣ ಮೀನುಗಾರಿಕೆಗೆ ತೆರಳಿರಲಿಲ್ಲ. ಸೋಮವಾರ ಸಂಜೆ ಬಿಡುವಿದ್ದರಿಂದ ಸೌಪರ್ಣಿಕಾ ನದಿಗೆ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು ಎನ್ನಲಾಗಿದೆ.
ಕುದ್ರುವಿನ ಬಳಿಯ ಸೌಪರ್ಣಿಕ ನದಿಯಲ್ಲಿ ಗಾಳ ಹಾಕಲು ತೆರಳಿದ್ದ ಮಂಜು ಮೊಗವೀರ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ನಾಪತ್ತೆಯಾಗಿದ್ದ ಮಂಜು ಮೊಗವೀರರನ್ನು ಹುಡುಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ