Site icon Kundapra.com ಕುಂದಾಪ್ರ ಡಾಟ್ ಕಾಂ

ನನ್ನದು ಪಕ್ಷಾಂತರಿಯ ವಿರುದ್ಧ ಸ್ಪರ್ಧೆ: ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎಸ್.ಪಿ. ದಿನೇಶ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ಎರಡು ಚುನಾವಣೆಯಲ್ಲಿ ಸ್ಫರ್ಧೆ ಮಾಡಿದ್ದು, ಈ ಭಾರಿ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದೇನೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್.ಪಿ ದಿನೇಶ್ ಹೇಳಿದರು.

ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 10 ತಿಂಗಳ ಹಿಂದೆ ಪಕ್ಷದ ವರಿಷ್ಠರು ನನಗೆ ಟಿಕೆಟು ನೀಡುವುದಾಗಿ ತಿಳಿಸಿದ್ದರು. ಅಂತೆಯೇ ನಾನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಕೊನೆಯ ಗಳಿಗೆಯಲ್ಲಿ ನನ್ನ ಹೆಸರನ್ನು ಕೈಬಿಟ್ಟು ಬೇರೆ ಪಕ್ಷದಿಂದ ಬಂದ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದರು. ಸಂವಿಧಾನದ 4 ಮನೆ, 4 ಪಕ್ಷವನ್ನು ನೋಡಿರುವ ವ್ಯಕ್ತಿಗೆ ಈಗ ಪಕ್ಷ ಟಿಕೇಟು ನೀಡಲಾಗಿದೆ. ರಾಹುಲ್ ಗಾಂಧಿ, ಸಿದ್ಧರಾಮಯ್ಯ ಅವರಿಗೆ ನಿಂದಿಸಿರುವ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಮುಜುಗರವಾಗುತ್ತದೆ ಎಂದರು. ನಾನು 2012 ಮತ್ತು 2018ರಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಈ ಬಾರಿ ನನ್ನ ಸ್ಪರ್ಧೆ ಪಕ್ಷದ ನಾಯಕರ ವಿರುದ್ಧವಲ್ಲ, ಪಕ್ಷಾಂತರಿಯ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ನೈರುತ್ಯ ಪದವೀಧರ ಕ್ಷೇತ್ರವು ವಿಶಾಲವಾದ ವ್ಯಾಪ್ತಿ ಹೊಂದಿದ್ದು 30 ವಿಧಾನಸಭಾ ಕ್ಷೇತ್ರ, 6 ಲೋಕಸಭಾ ಕ್ಷೇತ್ರ, 6 ಜಿಲ್ಲೆಯನ್ನು ಒಳಗೊಂಡಿದೆ. ಜೂನ್ 3 ರಂದು ನಡೆಯುವ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಪದ್ದತಿ ಇರುವುದರಿಂದ ಮತ ಹಾಕುವಾಗ ಮತಗಟ್ಟೆಯಲ್ಲಿ ಚುನಾವಣಾಧಿಕಾರಿಗಳು ನೀಡುವ ಪೆನ್ನಿನಿಂದಲೇ ಎಸ್.ಪಿ.ದಿನೇಶ್ ಹೆಸರಿನ ಮುಂದೆ ‘1’ ಎಂದು ಬರೆದು ಮತ ಚಲಾಯಿಸಬೇಕು ಎಂದರು.

ಈ ಸ್ಪರ್ಧೆ ಮಾಡುತ್ತಿರುವ ಮೂರು ವ್ಯಕ್ತಿಗಳು ಕೂಡಾ ಒಂದೇ ಮನೆಯಿಂದ ಬಂದವರು. ನಾನು ಮಾತ್ರ ಗಾಂಧಿ ಸಂಸ್ಕಂತಿಯಿಂದ ಬಂದವನು. ಇದು ನನ್ನ ಮೂರನೇ ಸ್ಪರ್ಧೆ, ಕ್ಷೇತ್ರದ ಪದವೀಧರ ಮತದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಇಲ್ಲಿ ನನಗೂ ಮತ್ತು ರಘುಪತಿ ಭಟ್ಟರ ನಡುವೆ ನೇರ ಸ್ಪರ್ಧೆ ನಡೆಯುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಈಶ್ವರ್, ಸಿದ್ದು ಉಪಸ್ಥಿತರಿದ್ದರು.

Exit mobile version