Site icon Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ: ಪ್ರಯೋಗಾಲಯ ಪರಿಕರಗಳ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಶಾಲೆಯ ಉನ್ನತಿಗೆ ಪೂರ್ವ ವಿದ್ಯಾರ್ಥಿಗಳ ಬೆಂಬಲ ಬೇಕು. ಶಾಲೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ. ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ಆಧರಿಸಿ ಬದುಕು ರೂಪಿಸಿಕೊಳ್ಳುತ್ತಾರೆ. ಅವರು ಗಳಿಸುವ ಸಾಮರ್ಥ್ಯ ಪಡೆದಾಗ ತಮ್ಮನ್ನು ಬೆಳೆಸಿದ ಶಾಲೆಯ ಉನ್ನತೀಕರಣಕ್ಕೆ ಸಾಧ್ಯವಾದ ಬೆಂಬಲ ನೀಡಬೇಕು ಎಂದು ಮರವಂತೆಯ ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಹೇಳಿದರು.

ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಮೊದಲ ವಿದ್ಯಾರ್ಥಿ ತಂಡ ರೂ 1.5 ಲಕ್ಷ ವೆಚ್ಚದಲ್ಲಿ ಶಾಲೆಗೆ ನೀಡಿದ ಪ್ರಯೋಗಾಲಯ ಪರಿಕರಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿ ಕಲಿತ ಈ ವಿದ್ಯಾರ್ಥಿ ತಂಡದ ಉಪಕ್ರಮ ಅನ್ಯ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ದಯಾನಂದ ಬಳೆಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಪಟಗಾರ್, ಉದ್ಯಮಿ ಸತೀಶ ಪೂಜಾರಿ, ಬೈಂದೂರು ಜೇಸಿಐ ಅಧ್ಯಕ್ಷೆ ಅನಿತಾ ಆರ್.ಕೆ, ಕೊಡುಗೆಯ ನೇತೃತ್ವ ವಹಿಸಿದ್ದ ಸಂತೋಷ್‌ಕುಮಾರ್, ರೋಶನ್ ಲೂವಿಸ್, ಮೊದಲ ವಿದ್ಯಾರ್ಥಿ ತಂಡದ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಹಿರಿಯ ಸಹಾಯಕ ಶಿಕ್ಷಕ ಸರ್ವೋತ್ತಮ ಭಟ್ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಭಟ್ ವಂದಿಸಿದರು. ಹಿತೇಶ ಶೆಟ್ಟಿ ನಿರೂಪಿಸಿದರು. ಮೊದಲ ವರ್ಷದಲ್ಲಿ ಶಿಕ್ಷಕರಾಗಿದ್ದ ಕೃಷ್ಣ ನೇರಳೆಕಟ್ಟೆ, ಜಯಶೀಲಾ ನಾಯಕ್, ಡಾ. ಕಿಶೋರ್‌ಕುಮಾರ ಶೆಟ್ಟಿ, ರಮಾನಂದ, ಅವರನ್ನು ಗೌರವಿಸಲಾಯಿತು.   

Exit mobile version