Kundapra.com ಕುಂದಾಪ್ರ ಡಾಟ್ ಕಾಂ

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ: ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿಗೆ ಭರ್ಜರಿ ಗೆಲುವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಸರ್ಜಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದ ಸೋಲಿಸುವ ಮೂಲಕ ಮೇಲ್ಮನೆ ಪ್ರವೇಶಿಸಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಪ್ರಾರಂಭವಾದ ದಕ್ಷಿಣ ಶಿಕ್ಷಕ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಪದವೀದರ ಚುನಾವಣೆಯ ಎಣಿಕೆ ಕಾರ್ಯ ಶುಕ್ರವಾರ ಬೆಳಗ್ಗೆವರೆಗೂ ನಡೆಯಿತು. ಇದರಲ್ಲಿ ದಕ್ಷಿಣ ಹಾಗೂ ನೈರುತ್ಯ ಶಿಕ್ಷಕ ಕ್ಷೇತ್ರಗಳೆರಡರಲ್ಲೂ ಮೈತ್ರಿ ಅಭ್ಯರ್ಥಿಗಳೇ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿಯೇ ಜಯಭೇರಿ ಬಾರಿಸಿದರು. ಇದೇ ವೇಳೆ ಬಿಜೆಪಿಯಿಂದ ಬಂಡಾಯ ಸ್ಪರ್ಧೆ ಮಾಡಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಮುಖಭಂಗವಾಗಿದೆ.

► ಇದನ್ನೂ ಓದಿ ಪರಿಷತ್‌ ಚುನಾವಣೆ: ಎಸ್.ಎಲ್.‌ ಬೋಜೇಗೌಡಗೆ ಗೆಲುವು, ಡಾ. ಧನಂಜಯ ಸರ್ಜಿಗೆ ಮುನ್ನಡೆ – https://kundapraa.com/?p=72780 .

ಬಿಜೆಪಿ-ಜೆಡಿಎಸ್ ಮೈತ್ರಿ ಅಭರ್ಥಿ ಡಾ. ಧನಂಜಯ ಸರ್ಜಿ ಅವರೂ ಮೊದಲ ಪ್ರಾಶಸ್ತ್ಯ ಮತಗಳ ಎಣಿಕೆಯಲ್ಲಿಯೇ 4 ನೇ ಸುತ್ತಿನ ಮುಕ್ತಾಯಕ್ಕೆ 14,417 ಮತಗಳ ಅಂತರ ಕಾಯ್ದುಕೊಳ್ಳುವ ಮೂಲಕ ಜಯ ದಾಖಲಿಸುವ ಸೂಚನೆ ನೀಡಿದ್ದರು.

ಬೆಳಗ್ಗೆಯಿಂದ ಆರಂಭವಾದ ನೈರುತ್ಯ ಪದವೀದರ ಕ್ಷೇತ್ರದ ಚುನಾವಣೆಯ ಎಣಿಕೆ ಕಾರ್ಯದಲ್ಲಿ ಮೊದಲ ಸುತ್ತಿನಿಂದಲೂ ಧನಂಜಯ ಸರ್ಜಿ ಅವರು ತಮ್ಮ ಸಮೀಪದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡರು. ಮೊದಲ ಸುತ್ತಿನಲ್ಲಿ ಧನಂಜಯ ಸರ್ಜಿ ಅವರು 6714 ಮತ ಗಳಿಸುವ ಮೂಲಕ ಆಯನೂರು ಮಂಜುನಾಥ (2434) ಅವರಿಗಿಂತ 4280 ಮತಗಳ ಮುನ್ನಡೆ ಸಾಧಿಸಿದರು. ಅದೇ ರೀತಿ 2 ನೇ ಸುತ್ತಿನಲ್ಲಿ 8,827 ಮತ, 3 ನೇ ಸುತ್ತಿನಲ್ಲಿ 14417, 4 ನೇ ಸುತ್ತಿನಲ್ಲಿ 19,973 ಮತಗಳ ಮುನ್ನಡೆ ಪಡೆದರು.4ನೇ ಸುತ್ತಿನ ಮುಕ್ತಾಯಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭರ್ಥಿ ಡಾ. ಧನಂಜಯ ಸರ್ಜಿ 19,973 ಮತಗಳ ಮುನ್ನಡೆ ಪಡೆದುಕೊಂಡಿದ್ದರು.

ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ಗೆಲ್ಲುವ ಸೂಚನೆ ನೀಡಿದ್ದ ಡಾ. ಸರ್ಜಿ ಅವರು ಅಂತಿಮ ಹಂತದಲ್ಲಿ ತಮ್ಮ ಮುನ್ನಡೆಯನ್ನು ಮತ್ತಷ್ಚು ಹೆಚ್ಚಿಸಿಕೊಂಡ ಅವರು ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಪರಿಷತ್ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ 3 ಕ್ಷೇತ್ರಗಳಲ್ಲಿ ಗೆದ್ದಂತಾಗಿದೆ.

Exit mobile version