Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವಂತೆ ವಿಶ್ವಕರ್ಮ ಸಂಘಟನೆಗಳಿಂದ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ
:  7ನೇ ತರಗತಿಯ ವಿದ್ಯಾರ್ಥಿ ಪ್ರಥ್ವಿ ಎಂಬಾತನನ್ನು ಸೈಕಲ್‌ನಲ್ಲಿ ಆಟವಾಡುತ್ತಿರುವಾಗ ಶಾಂತಾರಾಮ ಶೆಟ್ಟಿ ನಾರುಮಕ್ಕಿ ಎಂಬಾತ ಜೂ.17 ರಂದು ಗಂಭೀರವಾಗಿ ಹಲ್ಲೆ ನಡೆಸಿದ್ದು, ಈ ಬಗ್ಗೆ ದೂರು ದಾಖಲಾಗಿ ಆರು ದಿನಗಳು ಕಳೆದರು ಆರೋಪಿಯನ್ನು ಪೊಲೀಸರು ಬಂಧಿಸದ ಹಿನ್ನಲೆಯಲ್ಲಿ ಭಾನುವಾರ ಶಂಕರನಾರಾಯಣ ಪೊಲೀಸ್ ಠಾಣೆಗೆ ವಿಶ್ವಕರ್ಮ ಸಂಘಟನೆಗಳ ನೇತ್ರತ್ವದಲ್ಲಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಮನವಿಗೂ ಮೊದಲು ಶಂಕರನಾರಾಯಣ ಪೊಲೀಸ್ ಠಾಣೆಯ ಎದುರು ಸಂಘಟನೆಯ ಮುಖಂಡರು ಸೇರಿ ಸಭೆ ನಡೆಸಿದರು.

ಸಭೆಯಲ್ಲಿ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ ಮಾತನಾಡಿ, ಆರೋಪಿ ನಾರುಮಕ್ಕಿ ಶಾಂತರಾಮ ಶೆಟ್ಟಿ ಎಂಬ ವ್ಯಕ್ತಿ ಸಣ್ಣ ಬಾಲಕನ ಮೇಲೆ ಹಲ್ಲೆ ನಡೆಸಿರುವುದು ಹೇಯ ಕೃತ್ಯ. ಕೆಟ್ಟ ಮನಸ್ಥಿತಿ ಇರುವ ವ್ಯಕ್ತಿಗಳು ಮಾಡು ಕೃತ್ಯವಾಗಿದೆ. ಈ ಕೃತ್ಯದ ವಿರುದ್ಧ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಕೂಡುವಳಿಯ ಎಲ್ಲಾ ಸಮಾಜದವರು ಮತ್ತು ವಿಶ್ವಕರ್ಮ ಸಮಾಜ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ. ಆರೋಪಿಯನ್ನು ಅತೀ ಶೀಘ್ರವಾಗಿ ಬಂದಿಸದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಪೊಲೀಸ್ ಇಲಾಖೆಯನ್ನು ಎಚ್ಚರಿಸಿದರು.

ಹಿಂದೂ ಜಾಗರಣ ವೇದಿಕೆಯ ಮುಖಂಡ ಚಂದ್ರ ಆಚಾರ್ಯ ಶಿರಿಯಾರ ಮಾತನಾಡಿ, ಬಾಲಕನ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿ ನಾರುಮಕ್ಕಿ ಶಾಂತರಾಮ ಶೆಟ್ಟಿ ಅಪರಾಧ ಹಿನ್ನಲೆ ಇರುವ ವ್ಯಕ್ತಿಯಾಗಿದ್ದಾನೆ. ಗೋ ಸಾಗಣಿಕೆಯ ಅನೇಕ ಕೇಸುಗಳು ದಾಖಲಾಗಿವೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವ ವ್ಯಕ್ತಿಯಾಗಿದ್ದಾನೆ. ಬಾಲಕನ ಮೇಲೆ ಹಲ್ಲೆ ಕೇಸಿನಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಬಾಲಕನ ತಂದೆ ರಾಘವೇಂದ್ರ ಆಚಾರ್ಯ ಅವರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಹೋಗಿ ಬೆದರಿಕೆ ಹಾಕಿ ಬಂದಿದ್ದಾನೆ. ಇತಂಹ ವ್ಯಕ್ತಿಯನ್ನು ಪೊಲೀಸರು ಬಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

ನಮ್ಮ ಭೂಮಿ ಸಂಸ್ಥೆಯ ಗಣೇಶ ಶೆಟ್ಟಿ ಅವರು ಮಾತನಾಡಿ, ಆರೋಪಿ ಶಾಂತರಾಮ ಶೆಟ್ಟಿ ಮಾಡಿರುವ ಹಲ್ಲೆ ಮಕ್ಕಳ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಮಕ್ಕಳ ಮೇಲೆನ ದೌರ್ಜ್ಯನವಾಗಿದೆ. ಮಗು ಆಟಮಾಡುತ್ತಿರುವಾಗ ಮಾಡಿರುವ ಹಲ್ಲೆ ಮತ್ತು ಬೆದರಿಕೆ ಹಾಕಿರುವುದು ಘೋರ ಅಪರಾಧ. ಬಾಲಕನಿಗೆ ದೈಹಿಕ ಹಾಗೂ ಮಾನಸಿಕ ಹಲ್ಲೆಯಾಗಿದೆ. ಈ ಪ್ರಕರಣ ಪೋಕ್ಸೋ ಪ್ರಕರಣದ ಅಡಿಯಲ್ಲಿ ಕೇಸು ದಾಖಲಾಗಬೇಕು. ಮಗುವಿನ ಹಲ್ಲೆ ಪ್ರಕರಣವನ್ನು ಇಡೀ ಕರ್ನಾಟಕಕ್ಕೆ ಗೋತ್ತಾಗಬೇಕು. ಈ ಪ್ರಕರಣವನ್ನು ಹೀಗೇ ಬಿಟ್ಟರೇ ಪದೇ ಪದೇ ಮಕ್ಕಳ ಮೇಲಿನ ಪ್ರಕರಣ ಹೆಚ್ಚಾಗುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಒತ್ತಡಕ್ಕೆ ಒಳಗಾಗಬಾರದು ಎಂದರು.

ಶಂಕರನಾರಾಯಣ ಪೊಲೀಶ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಾಸೀರ್‌ಹುಸೇನ್ ಅವರು ಮನವಿಯನ್ನು ಸ್ವೀಕರಿಸಿ ಮಾತನಾಡಿ, ಆರೋಪಿಯನ್ನು ಬಂದಿಸುವ ಬಗ್ಗೆ ಪೊಲೀಸ್ ತಂಡ ಕಾರ್ಯಾಚರಿಸುತ್ತಿದೆ. ಆರೋಪಿಯ ಮನೆಯನ್ನು ತಲಾಶ್ ಮಾಡಿ, ಮೊಬೈಲ್‍ನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಯು ಎಲ್ಲೇ ಇದ್ದರೂ, ಕೂಡಲೆ ಬಂದಿಸುತ್ತೇವೆ ಎಂದರು.

ಈ ಸಂದರ್ಭ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, 2ನೇ ಮೊಕ್ತೇಸರ ಪ್ರಭಾಕರ ಆಚಾರ್ಯ ಚಿತ್ತೂರು, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಚಂದ್ರ ಆಚಾರ್ಯ ಶಿರಿಯಾರ, ನಮ್ಮ ಭೂಮಿ ಸಂಸ್ಥೆಯ ಗಣೇಶ್ ಶೆಟ್ಟಿ, ಶಂಕರನಾರಾಯಣ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯ ಆಚಾರ್ಯ, ಜನ್ಸಾಲೆ ಮಾಗಣಿ ಮೊಕ್ತೇಸರರಾದ ಕೃಷ್ಣಯ್ಯ ಆಚಾರ್ಯ, ಉಳ್ಳೂರು-74 ರಾಘವೇಂದ್ರ ಆಚಾರ್ಯ, ಹಳ್ಳಾಡಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯರಾಮ ಆಚಾರ್ಯ, ಅಮಾಸೆಬೈಲು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಕೆಲ, ಶಂಕರನಾರಾಯಣ ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಕಾರೆಬಲು, ಗೋಳಿಯಂಗಡಿ ನಾಗರಾಜ ಆಚಾರ್ಯ, ಕೊಕ್ಕರ್ಣೆ ಪ್ರಕಾಶ್ ಆಚಾರ್ಯ, ಹಲ್ಲೆಗೊಳಗಾದ ಬಾಲಕನ ತಂದೆ ರಾಘವೇಂದ್ರ ಆಚಾರ್ಯ, ತಾಯಿ ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.

ಪ್ರಕರಣದ ಹಿನ್ನಲೆ: ಜನ್ಸಾಲೆ ಹರ್ಷ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಪ್ರಥ್ವಿ(13)ಎಂಬ ಬಾಲಕನಿಗೆ ಸಿದ್ದಾಪುರ ಗ್ರಾ.ಪಂ. ರಸ್ತೆಯ ಹೆಗ್ಗೇರಿ ಬಳಿ ಸೈಕಲ್‌ನಲ್ಲಿ ಆಟ ಆಡುವಾಡುತ್ತಿರುವಾಗ ಸ್ಕೂಟಿಯಲ್ಲಿ ಬಂದ ಆರೋಪಿ ಶಾಂತರಾಮ ಶೆಟ್ಟಿ ನಾರುಮಕ್ಕಿ (56) ಏಕಾಎಕಿಯಾಗಿ ಹಲ್ಲೆ ಮಾಡುತ್ತಾನೆ. ಬಾಲಕನ ಸೈಕಲ್ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೋಳಿಸಿದನ್ನು. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದುಕೊಂಡಿರುತ್ತಾನೆ.

ಬಾಲಕನನ್ನು ಅಡ್ಡಕಟ್ಟಿದ ಆರೋಪಿ ಅವಾಚ್ಚ ಶಬ್ಧಗಳಿಂದ ಬದು ಹಲ್ಲೆ ಮಾಡಿದರು. ಕೆನ್ನೆಗೆ ಕೈಯಿಂದ ಹಲ್ಲೆ ಮಾಡಿ, ಕಾಲಿನಿಂದ ಎದೆಗೆ ಮತ್ತು ಹೊಟ್ಟೆಗೆ ಕಾಲಿನಿಂದ ಬಲವಾಗಿ ತುಳಿದಿದ್ದಾನೆ. ಸೈಕಲ್ ಮೇಲೆ ಕಲ್ಲು ಎತ್ತಿಹಾಕಿ, ಸೈಕಲ್‌ನ್ನು ಜಖಂಗೊಳಿಸಿದ್ದಾನೆ. ಘಟನೆ ನಡೆದ ಸ್ಥಳದ ಪಕ್ಕದ ಮನೆಯವರು ಬಾಲಕನನ್ನು ರಕ್ಷಿಸಿದರು. ಬಾಲಕನ ತಾಯಿ ಪ್ರತಿಮಾ ಅವರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Exit mobile version