Kundapra.com ಕುಂದಾಪ್ರ ಡಾಟ್ ಕಾಂ

ಮೊಬೈಲ್ ಇವಿಎಂ ಮೂಲಕ‌ ಕುಂದಾಪುರ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿ ಸಂಸತ್ ಚುನಾವಣೆ, ಎಸಿ‌ ಶ್ಲಾಘನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.    
ಕುಂದಾಪುರ:
ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) 2024-25ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಮೊಬೈಲ್ ಇವಿಎಮ್ ಮೂಲಕ ಗುರುವಾರ ಶಾಲಾ ವಠಾರದಲ್ಲಿ ನಡೆಯಿತು.

ಸಂಸ್ಥೆಯ ಉಪಪ್ರಾಂಶುಪಾಲರಾದ ಕಿರಣ ಹೆಗ್ಡೆ ಅವರು ಮುಖ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಹಿಂತೆಗದುಕೊಳ್ಳುವಿಕೆ, ಮತದಾನ, ಫಲಿತಾಂಶ ಘೋಷಣೆ ಎಲ್ಲವನ್ನೂ ಅತ್ಯಂತ ಕ್ರಮಬದ್ಧವಾಗಿ ನಡೆಸಲಾಯಿತು. ಆಧಾರ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಪುಸ್ತಕವನ್ನು ದಾಖಲೆಯಾಗಿ ಬಳಸಿ ಸುಮಾರು 440 ವಿದ್ಯಾರ್ಥಿಗಳು ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಹಾಗೂ   ತಹಶೀಲ್ದಾರ್ ಶೋಭಾಲಕ್ಷ್ಮೀ ಅವರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಎಸಿ ರಶ್ಮಿ ಎಸ್.ಆರ್. ಅವರು ಮಾತನಾಡಿ, ಮಕ್ಕಳಿಗೆ ಚುನಾವಣಾ ಶಿಕ್ಷಣ ನೀಡುವುದರಿಂದ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಯಶ್ವಸ್ಸು ಸಾಧ್ಯ ಎಂದು ಹೇಳಿದರು. ಚುನಾವಣೆಯಲ್ಲಿ ಶಾಲಾ ನಾಯಕನಾಗಿ 10ಬಿ ತರಗತಿಯ  ಸಾಯಿಪ್ರಣಾಮ್ ಮತ್ತು ಉಪನಾಯಕನಾಗಿ ಸೀಮಂತ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳೇ ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕಿಯರು ಸಹಕರಿಸಿದರು.

Exit mobile version