Kundapra.com ಕುಂದಾಪ್ರ ಡಾಟ್ ಕಾಂ

ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ತಾಲೂಕು ಕೇಂದ್ರಗಳಲ್ಲಿ ಸಾಧನ ಸಲಕರಣೆಗಳ ವಿತರಣೆಗೆ ತಪಾಸಣಾ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ,ಜು.6:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಉಡುಪಿ (ಅನುಷ್ಠಾನ-ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ) ಹಾಗೂ ಕೃತಕ ಅಂಗಾಂಗ ತಯಾರಿಕ ಕಾರ್ಪೊರೇಷನ್ ಆಫ್ ಇಂಡಿಯಾ (ಅಲಿಂಕೋ) ಇವರ ಸಹಯೋಗದೊಂದಿಗೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಎ. ಡಿ. ಐ. ಪಿ ಮತ್ತು ಆರ್. ವಿ. ವೈ ಯೋಜನೆಯಡಿಯಲ್ಲಿ ದಿವ್ಯಾಂಗ ವ್ಯಕ್ತಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣೆಗಾಗಿ ತಪಾಸಣಾ ಶಿಬಿರ ಜರುಗಲಿದೆ.

ತಪಾಸಣಾ ಶಿಬಿರವು ಜುಲೈ 10 ರಂದು ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜು.11 ರಂದು ಬೈಂದೂರಿನ ಅಂಬೇಡ್ಕರ್ ಭವನ, ಜು. 12 ರಂದು ಕಾಪುವಿನ ಜೆ.ಸಿ ಭವನ, ಜು. 14 ರಂದು ಬ್ರಹ್ಮಾವರ ಪೊಲೀಸ್ ಠಾಣೆ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜು. 15 ರಂದು ಕುಂದಾಪುರದ ಜೂನಿಯರ್ ಕಾಲೇಜು ಆವರಣ, ಜು. 16 ರಂದು ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಜು. 18 ರಂದು ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ನಡೆಯಲಿದೆ.

ಅಡಿಪ್ ಯೋಜನೆಯಡಿ ವಿಕಲಚೇತನರು ಸಾಧನ ಸಲಕರಣೆಯ ಲಾಭವನ್ನು ಪಡೆಯಲು ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ), ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್ ಅಥವಾ ವಾರ್ಷಿಕ ಆದಾಯ ರೂ2,70,000 ಮೀರದಿರುವ ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಪೋಟೋವನ್ನು ಸಲ್ಲಿಸಬೇಕು.

ರಾಷ್ಟೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರು ಸಾಧನ ಸಲಕರಣೆ ಪಡೆಯಲು ಹಿರಿಯ ನಾಗರಿಕರ ಗುರುತಿನ ಚೀಟಿ ಅಥವಾ ವಯೋಮಿತಿ ಸೂಚಿಸುವ ದಾಖಲಾತಿ, ಆಧಾರ್ ಕಾರ್ಡ್ , ಬಿ. ಪಿ. ಎಲ್. ಕಾರ್ಡ್ ಅಥವಾ ವಾರ್ಷಿಕ ಆದಾಯ 2,70,000 ರೂ. ಮೀರದಿರುವ ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಪೋಟೋವನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ, ಮಣಿಪಾಲ ದೂ.ಸಂಖ್ಯೆ: 0820-2574810, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಅಜ್ಜರಕಾಡು, ಉಡುಪಿ ದೂ.ಸಂಖ್ಯೆ: 0820-2533372 ಹಾಗೂ ಉಡುಪಿ ಮೊ.ನಂ: 9449334270, ಕುಂದಾಪುರ ಮೊ.ನಂ: 9901824878 ಮತ್ತು ಕಾರ್ಕಳ ಮೊ.ನಂ: 9741235518 ಎಂ. ಆರ್. ಡಬ್ಲೂಂಯ ಗಳನ್ನು ಸಂಪರ್ಕಿಸಬಹುದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ರೆಡ್ ಕ್ರಾಸಿನ ಉಪ ಸಭಾಪತಿ ಬಸ್ರೂರು ರಾಜೀವ್  ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ, ಡಿಡಿಆರ್‌ಸಿ ಸದಸ್ಯ ಕಾರ್ಯದರ್ಶಿ ಎಕ್ಕಾರು ಡಾ. ಗಣನಾಥ ಶೆಟ್ಟಿ, ಅಂಗವಿಕಲ ಇಲಾಖೆಯ ಶಿವಾಜಿ ಉಪಸ್ಥಿತರಿದ್ದರು.

Exit mobile version