ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಅಮಾಸೆಬೈಲು ಚಟ್ಟರಿಕಲ್ ನಿಂದ ಕಲ್ಲು ಸಾಗಿಸುತ್ತಿದ್ದ ಲಾರಿ ಚರಂಡಿಗೆ ಇಳಿದ ಪರಿಣಾಮ ಅದನ್ನು ಮೇಲೆತ್ತಲು ಬಂದಿದ್ದ ಕ್ರೇನಿನ ಬದಿಯಲ್ಲಿ ನಿಂತಿದ್ದ ಇನ್ನೊಂದು ಲಾರಿ ಚಾಲಕನ ಮೇಲೆ ಕ್ರೇನ್ ಮಗುಚಿ ಬಿದ್ದದ್ದರಿಂದ ಚಾಲಕ ಕೃಷ್ಣ (33) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ.
ಚರಂಡಿಗೆ ಲಾರಿ ಇಳಿದ್ದರಿಂದ ಲಾರಿಯನ್ನು ಕ್ರೇನ್ನಿಂದ ಮೇಲೆತ್ತಿರುವುದನ್ನು ನೋಡಲು ತನ್ನ ಲಾರಿಯನ್ನು ನಿಲ್ಲಿಸಿ ಬಂದಿದ್ದ ಕೃಷ್ಣ ದೂರದಲ್ಲಿಯೇ ನಿಂತು ನೋಡುತ್ತಿದ್ದಾಗ ಏಕಾಏಕಿ ಕ್ರೇನ್ ಈತನ ತಲೆಯ ಮೇಲೆಯೇ ಮಗುಚಿ ಬಿದ್ದದ್ದರಿಂದ ತಲೆಗೆ ಗಂಭೀರ ಗಾಯಗಳಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಅಮಾಸೆಬೈಲು ಠಾಣಾಧಿಕಾರಿ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದೆ.