Kundapra.com ಕುಂದಾಪ್ರ ಡಾಟ್ ಕಾಂ

ನ.8ರ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿ ಚಾತುರ್ಮಾಸದ ದಿಗ್ವಿಜಯ ಮಹೋತ್ಸವಕ್ಕೆ ಸಿದ್ಧತೆ

ಕುಂದಾಪ್ರ ಡಾಟ್ ಕಾಂ ವಿಶೇಷ

ಕುಂದಾಪುರ: ಕೋಟೇಶ್ವರ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮಿಜಿಯವರ ಚಾತುರ್ಮಾಸ್ಯದ ದಿಗ್ವಿಜಯ ಮಹೋತ್ಸವದ ಅಂಗವಾಗಿ ವೈಭವೋಪೇತ ಕಾರ್ಯಕ್ರಮ ನಡೆಸಲು ಸಮಾಜ ಬಂಧುಗಳಿಂದ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ನವೆಂಬರ್ 8ರ ಸಂಜೆ 5:30ಕ್ಕೆ ದೇವಳದಿಂದ ಹೊರಡುವ ದಿಗ್ವಿಜಯ ಮೆರವಣಿಗೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧೆಡೆಗಳಲ್ಲಿ ವಾಸವಾಗಿರುವ ಸಮಾಜ ಭಾಂಧವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹೋತ್ಸವದ ಯಶಸ್ಸಿಗೆ ಕಾರಣೀಭೂತರಾಗುವಂತೆ ದೇವಳದ ಚಾತುರ್ಮಾಸ್ಯ ಸಮಿತಿ ಕೋರಿಕೊಂಡಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ ಹಾಗೂ ಚಾತುರ್ಮಾಸ್ಯದ ಹಿನ್ನಲೆ

ಕೋಟೇಶ್ವರ ಪೇಟೆಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಭಾಂದವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನವು ಕಾಶೀ ಮಠದ ಪರಮಪೂಜ್ಯ ಶ್ರೀಮತ್ ಸುಕ್ರತೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ 1937 ಜನವರಿ 3ರಂದು ಶಂಕುಸ್ಥಾಪನೆಗೊಂಡು, 1940 ಫೆಬ್ರವರಿ 14ರಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ದೇವರ ಪ್ರತಿಷ್ಠಾಪನೆಯಾಯಿತು. ಪಟ್ಟದಲ್ಲಿ ಕುಳಿತ ಶ್ರೀ ಸೀತಾಮಾತೆ ಸಹಿತ ಶ್ರೀ ರಾಮಚಂದ್ರ ಇಲ್ಲಿನ ಆರಾದ್ಯ ದೇವರು. ಕೆಳಗಡೆ ಶ್ರೀ ಆಂಜನೇಯ ದೇವರು, ಉತ್ಸವ ಮೂರ್ತಿ ಶ್ರೀದೇವಿ, ಭೂದೇವಿ ಸಹಿತ ಶ್ರೀ ವೆಂಕಟರಮಣ ದೇವರುಗಳ ಆವಾಸ ಸ್ಥಾನವಿದೆ.

[quote font_size=”14″ bgcolor=”#ffffff” bcolor=”#f49638″ arrow=”yes” align=”right”]ವಿಶೇಷತೆಗಳು:
* ದೇವಳದಲ್ಲಿ ಪ್ರತಿದಿನ ರಾತ್ರಿ ಭಜನೆ ಹಾಗೂ ವಸಂತ ಪೂಜೆ, ದಿನಂಪ್ರತಿ ಸ್ತೋತ್ರ ಹಾಗೂ ಬಾಲ ಭಜನಾ ಮಂಡಳಿಯಿಂದ ಭಜನೆ ನಡೆಯುತ್ತಾ ಬಂದಿದೆ.
* 1946ರಲ್ಲಿ ಕೋಟೇಶ್ವರದಲ್ಲಿ ಶ್ರೀಮತ್ ಸುಕ್ರತೀಂದ್ರ ತೀರ್ಥ ಸ್ವಾಮೀಜಿಯವರ ಹಾಗೂ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮೊದಲ ಬಾರಿಗೆ ಜರಗಿತ್ತು.
* ಶ್ರೀಮತ್ ಸುಕ್ರತೀಂದ್ರ ತೀರ್ಥ ಸ್ವಾಮೀಜಿಯವರ ಪಾದಪೂಜೆ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಂದ ಹಾಗೂ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಾದಪೂಜೆ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ನಡೆದಿತ್ತು.
* 1984ರ ಚಾತುರ್ಮಾಸ ಆತಿಥಿ-ಸತ್ಕಾರ ಜಿ.ಎಸ್.ಬಿ ಸಮಾಜಕ್ಕೆ ಮಾದರಿಯಾಗಿತ್ತು. ಮಂಗಳೂರಿನಲ್ಲಿರುವ ಗೌಡ ಸಾರಸ್ವತ ಸಮಾಜದ ಬಹು ದೊಡ್ದ ದೇವಸ್ಥಾನದಲ್ಲಿ ಶ್ರೀ ಪಟ್ಟಾಭಿ ರಾಮಚಂದ್ರ ದೇವಳದ ಆಡಳಿತ ಮಂಡಳಿಯನ್ನು ಅತ್ಯುತ್ತಮ ಚಾತುರ್ಮಾಸವನ್ನು ಸಂಘಟಿಸಿದ ಸಲುವಾಗಿ ಗೌರವಿಸಲಾಗಿತ್ತು.
* ಕೀರ್ತಿ ಕಿರೀಟಕ್ಕೆ ಮತ್ತೊಂದು ಗರಿ ಎಂಬಂತೆ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಹಾಗೂ ಶ್ರೀ ಭುವನೇಂದ್ರ ಪಂಚಕರ್ಮ ಕೇಂದ್ರ ಸ್ಥಾಪನೆಗೆ 16.5 ಸೆಂಟ್ಸ ಜಾಗವನ್ನು ದೇವಸ್ಥಾನದ ವತಿಯಿಂದ ನೀಡಲಾಯಿತು.
* ದೇವಸ್ಥಾನದ 75 ವರ್ಷದ ಸಂಧರ್ಭದಲ್ಲಿ ರಜತ ಪುಷ್ಪ ರಥವನ್ನು ಅರ್ಪಿಸಲಾಯಿತು.[/quote]

ದೇವಸ್ಥಾನದಲ್ಲಿ 1946ರಲ್ಲಿ ಮೊದಲ ಬಾರಿಗೆ ಪರಮಪೂಜ್ಯ ಶ್ರೀಮತ್ ಸುಕ್ರತೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ನಡೆದಿದ್ದು ಬಳಿಕ ಅವರ ಪಟ್ಟಾ ಶಿಷ್ಯರಾಗಿದ್ದ ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸವು 1952, 1967 ಹಾಗೂ 1984ರಲ್ಲಿ ನಡೆದಿತ್ತು. 1994 ವಸಂತ ಮಾಸ ವಿಜೃಂಭಣೆಯಿಂದ ಜರಗಿದ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಶ್ರೀ ರಾಮ ಸೇವಾ ಸಂಘ
ಶ್ರೀ ದೇವಳದ ದೈನಂದಿನ ಚಟುವಟಿಕೆಗಳಲ್ಲಿ ಮತ್ತು ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿಯೊಂದಿಗೆ ಸಹಕಾರಿಯಾಗಲು 1960 ರಲ್ಲಿ ಶ್ರೀ ರಾಮ ಸೇವಾ ಸಂಘದ ಸ್ಥಾಪನೆಯಾಯಿತು. ಸಂಘದ ಸದಸ್ಯರಿಂದ ಶ್ರೀ ಶಾರದಾ ಪೂಜಾ ಮಹೋತ್ಸವ ನಡೆಯುತ್ತಾ ಬಂದಿದೆ.

ಸಂಘದ ಸಾಮಾಜಿಕ ಕಾರ್ಯಕ್ರಮಗಳು
* ವಿದ್ಯಾರ್ಥಿವೇತನ: ಕಳೆದ ಹಲವಾರು ವರ್ಷಗಳಿಂದ ಊರ-ಪರವೂರಿನ ಸಮಾಜದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 1 ಲಕ್ಷದಷ್ಟು ವಿದ್ಯಾರ್ಥಿವೇತನ ವಿತರಣೆ.
* ಶ್ರೀರಾಮ ಪ್ರಸಾದ: ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ 75 ವಿಧ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ.
* ಶ್ರೀ ರಾಮ ಶಿಶು ಮಂದಿರ: ಕಳೆದ 25 ವರ್ಷಗಳಿಂದ ಚಿಕ್ಕ ಮಕ್ಕಳಿಗಾಗಿ ಅಂಗನವಾಡಿ ಆರಂಭಿಸಿ ಮನ್ನಡೆಸಿಕೊಂಡು ಬರಲಾಗುತ್ತಿದೆ.
* ಆರೋಗ್ಯ ಸೇವೆ: ವರ್ಷಂಪ್ರತಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ದಂತ ಚಿಕಿತ್ಸಾ ಶಿಬಿರ, ಕಣ್ಣಿನ ತಪಾಸಣಾ ಶಿಬಿರ ಆಯೋಜಿಸುತ್ತಾ ಬಂದಿದೆ.
* ಆಯುರ್ವೇದ ವೈದ್ಯಶಾಲಾ ಹಾಗೂ ಪಂಚಕರ್ಮ ಕೇಂದ್ರ ಸ್ಥಾಪನೆಗೆ ಸಂಘದ ವತಿಯಿಂದ ಸುಮಾರು 40 ಲಕ್ಷದ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಯಿತು. (ಕುಂದಾಪ್ರ ಡಾಟ್ ಕಾಂ ವರದಿ)

ಈ ಭಾರಿಯ ಚಾತುರ್ಮಾಸ್ಯದ ಹಿನ್ನೋಟ:
ಮನ್ಮಥನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಆಚರಿಸಲು ಶ್ರೀ ಕಾಶೀಮಠಾಧಿಶ ಶ್ರೀಮತ್‌ ಸುಧೀಂದ್ರ ತೀರ್ಥ ಶ್ರೀಗುರುವರ್ಯರ ಪಟ್ಟ ಶಿಷ್ಯ ಶ್ರೀಮತ್‌ ಸಂಯಮೀಂದ್ರ ತೀರ್ಥ ಶ್ರೀ ಗುರುವರ್ಯರು ಜು. 29ರಂದು ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನಕ್ಕೆ ಆಗಮಿಸಿದ್ದರು. ಶ್ರೀಗುರುವರ್ಯರ ಅಮೃತ ಹಸ್ತಗಳಿಂದ ಜು. 31ರಂದು ಶ್ರೀ ಪಟ್ಟಾಭಿರಾಮಚಂದ್ರ ದೇವರಿಗೆ ಸಹಸ್ರ ಕುಂಭಾಭಿಷೇಕ, ಆ. 1ರಂದು ಪರಮ ಪೂಜ್ಯ ಶ್ರೀಮತ್‌ ಸುಕೃತೀಂದ್ರ ತೀರ್ಥ ಶ್ರೀ ಗುರುವರ್ಯರ ಪುಣ್ಯತಿಥಿ ಆಚರಣೆಯ ಬಳಿಕ ಆ. 4ರಂದು ಚಾತುರ್ಮಾಸ ವ್ರತ ಸ್ವೀಕಾರ ನಡೆದಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)

ದೇವಳದಲ್ಲಿ ಶ್ರೀಗಳ ಚಾತುರ್ಮಾಸ ಅವಧಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಶ್ರೀಗಳ ಉಪಸ್ಥಿತಿಯಲ್ಲಿ ವಿವಿಧ ವಾರ್ಷಿಕ ಧಾರ್ಮಿಕ ಆಚರಣೆಗಳಾದ ಋಗುಪಾಕರ್ಮ, ವರಮಹಾಲಕ್ಷ್ಮೀ ವ್ರತ, ಭಜನ ಸಪ್ತಾಹ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಶ್ರೀಅನಂತ ಚತುರ್ದಶಿ ವ್ರತ, ನವರಾತ್ರಿಯ ಶಾರದಾ ಪೂಜೆ ನಡೆದಿದ್ದು ದೀಪಾವಳಿ ಹಬ್ಬ, ಉತ್ಥಾನ ದ್ವಾದಶಿ, ತುಲಸಿ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Exit mobile version