Kundapra.com ಕುಂದಾಪ್ರ ಡಾಟ್ ಕಾಂ

ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವ – “ಅಂಕುರ” ಕಾರ್ಯಕ್ರಮ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ
ಮೂಡುಬಿದಿರೆ:
ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರವು ಸೇವಾ ರೂಪದಲ್ಲಿ ಸಮಾಜಕ್ಕೆ ಒಳಿತನ್ನು ಮಾಡುವ ಸದುದ್ದೇಶದಿಂದ ಸಾಗುತಿತ್ತು ಆದರೆ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣದ ವ್ಯಾಪರೀಕರಣವಾಗುತ್ತಿದೆ. ಈ ನಡುವೆಯೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣ ಮಾಡದೇ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ಶ್ರಮಿಸುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠತನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.

ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ಸೋಮವಾರ ನಡೆದ ಮೊದಲ ಸ್ವಾಯತ್ತ ತರಗತಿಗಳ ಪ್ರಾರಂಭೋತ್ಸವದ ಸಲುವಾಗಿ ನಡೆದ “ಅಂಕುರ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಳ್ವಾಸ್ ಸದಾ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಒತ್ತು ನೀಡಿದೆ. ಸಾಂಸ್ಕೃತಿಕ, ಕ್ರೀಡಾ, ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ದತ್ತು ಸ್ವೀಕಾರದ ಅಡಿಯಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಸಂಸ್ಥೆಯು ಈ ಹಿಂದೆ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇತ್ತು. ಆಗ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ ಇದೀಗ ಸ್ವಾಯತ್ತ ಸ್ಥಾನಮಾನದೊಂದಿಗೆ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆ, ಫಲಿತಾಂಶವನ್ನು ನೀಡಲು ಸಹಕಾರಿಯಾಗಿದೆ. ಶೈಕ್ಷಣಿಕ ವರ್ಷವನ್ನು ಸರಿಯಾದ ಸಮಯದಲ್ಲಿ ಪೂರಣಗೊಳಿಸಲು ಸಾಧ್ಯ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾವು ಬೆಳೆಯುವ ಪರಿಸರ ನಮ್ಮ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪೋಷಕರು ಇದರ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳು ತಮ್ಮ ಪದವಿ ಜೀವನದಲ್ಲಿ  ಪಾಲ್ಗೊಳ್ಳುವ ಕಾರ್ಯಕ್ರಮ ಹಾಗೂ ನಾವು ಸಂಪಾದಿಸುವ ಜ್ಞಾನ ಮತ್ತು ಸಾಧನೆಯು  ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಕುಲಸಚಿವ (ಪರೀಕ್ಷಾಂಗ) ಡಾ. ನಾರಾಯಣ ಶೆಟ್ಟಿ, ಕುಲಸಚಿವ (ಆಡಳಿತ) ಡಾ. ಟಿ. ಕೆ. ರವೀಂದ್ರನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.

Exit mobile version