Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸತೀಶ್ ಪೂಜಾರಿ ನಿಧನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ
: ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಇ.ಎನ್‌.ಟಿ ತಜ್ಞ ಡಾ. ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಎಂಬಿಬಿಎಸ್‌, ಡಿಎಲ್‌ಓ ಪದವೀಧರರಾದ ಅವರು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಡಾ ಸತೀಶ್ ಅತ್ಯುತ್ತಮ ಗಾಯಕರಾಗಿದ್ದು, ಅನೇಕ ಸಂಗೀತ ವೀಡಿಯೊಗಳನ್ನು ಹೊರತಂದಿದ್ದರು. ಡಾ. ಎಸ್.‌ ಜಾನಕಿ ಅವರ ಅಭಿಮಾನಿಯಾಗಿದ್ದ ಅವರು ಡಾ. ಎಸ್.‌ ಜಾನಕಿ ಜಾನಕಿ ರಾಷ್ಟ್ರೀಯ ಪುರಸ್ಕಾರವನ್ನು ಪ್ರತಿವರ್ಷ ನಾಡಿನ ಖ್ಯಾತ ಗಾಯಕರು, ಸಂಗೀತಗಾರರಿಗೆ ನೀಡುತ್ತಿದ್ದರು. ಕೋಟ ಮನಸ್ಮಿತ ಫೌಂಡೇಶನ್‌ ಪಾಲುದಾರರಾಗಿದ್ದ ಇವರು ಯಶಸ್ವಿ ಸಂಘಟಕರಾಗಿದ್ದರು. ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದರು.

ಬಾಲ್ಯದಿಂದಲೂ ಸಿನಿಮಾಗಳಿಂದ ಪ್ರಭಾವಿತರಾಗಿದ್ದ ಡಾ. ಸತೀಶ್‌ ಅವರು, ವೈದ್ಯ ವೃತ್ತಿಯನ್ನೇ ಆಯ್ದುಕೊಂಡು ಸರ್ಜನ್‌ ಆಗುವ ಕನಸು ಕಂಡಿದ್ದರು. ಅದರೊಂತೆಯೇ ಎಂಬಿಬಿಎಸ್‌, ಡಿಎಲ್‌ಓ ಪದವಿ ಪಡೆದು ಸ್ವಂತ ಆಸ್ಪತ್ರೆ ಆರಂಭಿಸಿದ್ದರು.

ಫಿಟ್ನೆಸ್‌ ಬಗ್ಗೆ ಅತೀವ ಕಾಳಜಿ ಹೊಂದಿದ್ದು ಸ್ವತಃ ವೈದ್ಯರಾಗಿದ್ದ ಸತೀಶ್‌ ಅವರ ನಿಧನ ಅವರ ಆಪ್ತ ವಲಯದಲ್ಲಿ ತೀರಾ ಆಘಾತವನ್ನುಂಟುಮಾಡಿದೆ. ಕೋವಿಡ್‌ ತರುವಾಯ ಹೆಚ್ಚುತ್ತಿರುವ ಹೃದಯಾಘಾತ, ಹೃದಯ ಸ್ತಂಭನ ಹಾಗೂ ಹಠಾತ್‌ ಸಾವುಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂಬ ಕೂಗು ಕೇಳಿಬಂದಿದೆ.

ಮೃತರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

Exit mobile version