Kundapra.com ಕುಂದಾಪ್ರ ಡಾಟ್ ಕಾಂ

ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಯೋಗ ಸಹಕಾರಿ: ಆಟಕೆರೆ ಬಾಬು ಪೈ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಯೋಗಾಭ್ಯಾಸ ಮಾಡುವುದರಿಂದ ನಮಗೆ ಆಗುವ ಪ್ರಯೋಜನವನ್ನು ಅರಿತುಕೊಂಡು, ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಪ್ರತಿನಿತ್ಯ ಒಂದು ಗಂಟೆ ಯೋಗಾಸನ, ಪ್ರಾಣಾಯಾಮವನ್ನು ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೈಹಿಕವಾಗಿ, ಮಾನಸಿಕವಾಗಿ ಆಧ್ಯಾತ್ಮಿಕವಾಗಿ ಸದೃಢರಾಗಿರಲು ಯೋಗ ಸಹಕಾರಿಯಾಗುತ್ತದೆ ಎಂದು ಯೋಗ ತರಬೇತುದಾರರಾದ ಆಟಕೆರೆ ಬಾಬು ಪೈ ಕೋಟೇಶ್ವರ ಹೇಳಿದರು.

ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಆಶ್ರಯದಲ್ಲಿ ಶ್ರೀ ಶಾರದೋತ್ಸವದ ಸುವರ್ಣ ಸಂಭ್ರಮ-2024ರ ಪ್ರಯುಕ್ತ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಹತ್ತು ದಿನಗಳ ಕಾಲ ಜರಗಿದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಯೋಧ ಟಿ. ದಿನಕರ ಶ್ಯಾನುಭಾಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಯೋಗ ತರಬೇತುದಾರರಾದ ಆಟಕೆರೆ ಬಾಬು ಪೈ ಮತ್ತು ರೂಪಾ ಬಾಬು ಪೈ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಸೌಪರ್ಣಿಕಾ ಬಸವ ಖಾರ್ವಿ, ಜಿ.ವೆಂಕಟೇಶ ಶೆಣೈ, ನರಸಿಂಹ ದೇವಾಡಿಗ ಓಣಿಮನೆ, ಟಿ.ವಿಜಯಲಕ್ಷ್ಮೀ ವಿ.ಶೆಣೈ ಶುಭಾಶಂಸನೆಗೈದರು. ಶಿಬಿರಾರ್ಥಿಗಳ ಪರವಾಗಿ ಸುರೇಶ ಜಿಎಫ್‌ಸಿಎಸ್ ಮತ್ತು ಸೀತಾ ದೇವಾಡಿಗ ಅನಿಸಿಕೆ ಹಂಚಿಕೊಂಡರು. ಪುರೋಹಿತರಾದ ಜಿ.ರಾಘವೇಂದ್ರ ನಾರಾಯಣ ಆಚಾರ್ಯ, ಗೌರವಾಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ರಘುವೀರ ಕೆ., ಮಹಿಳಾ ಸಮಿತಿ ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ಸತೀಶ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ ಸಕ್ಲಾತಿ ವಂದಿಸಿದರು.

Exit mobile version