Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಜಿಲ್ಲಾ ಪ.ಪೂ. ಕಾಲೇಜು ಕನ್ನಡ ಉಪನ್ಯಾಸಕರ ಸಂಘದಿಂದ ಕನ್ನಡ ಕಾರ್ಯಗಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕಣ್ಣಿಗೆ ಕಾಣುವ ಕಲ್ಲು ಎಲ್ಲರಿಗೂ ಸಾಮಾನ್ಯವಾಗಿ ಕಂಡರೂ ಶಿಲ್ಪಿಗೆ ಮಾತ್ರ ಅದರೊಳಗಿನ ಅದಮ್ಯ ಶಕ್ತಿ ಎದ್ದು ಕಾಣುತ್ತದೆ. ಶಿಲ್ಪಿ ಕಲ್ಲಿನಲ್ಲಿರುವ ಬೇಡದಿರುವ ಅಂಶಗಳನ್ನು ಕೆತ್ತಿ ತೆಗೆದು ಸುಂದರ ಶಿಲ್ಪಕ್ಕೆ ರೂಪು ನೀಡುವಂತೆ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುತ್ತಾರೆ .ಈ ಹಿನ್ನಲೆಯಲ್ಲಿ ಶಿಕ್ಷಕರ ಕಾರ್ಯ ಮಹತ್ವದಾಗಿದೆ ಎಂದು ಕರ್ನಾಟಕ ಬ್ಯಾಂಕ್, ಪ್ರಾದೇಶಿಕ ಕಛೇರಿ ಉಡುಪಿ ಇಲ್ಲಿಯ ಸಹಾಯಕ ಮಹಾ ಪ್ರಬಂಧಕ ವಾದಿರಾಜ.ಕೆ ಹೇಳಿದರು.

ಅವರು ಗುರುವಾರ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಆಸರೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದಲ್ಲಿ ನಡೆದ ಕನ್ನಡ ಕಾರ್ಯಗಾರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು ಮಾತನಾಡಿ ಉಪನ್ಯಾಸಕರಿಗೆ ಪಾಠವನ್ನು ಮಾಡುವ ಮೊದಲು ಅದರ ಹಿಂದಿನ ತಯಾರಿ ಮುಖ್ಯವಾದುದು. ಹೆಚ್ಚು ಪುಸ್ತಕಗಳನ್ನು ಓದಿ ಹೊಸತನವನ್ನು ರೂಪಿಸಿಕೊಂಡು ಮಕ್ಕಳಲ್ಲೂ ಆ ಗುಣಗಳನ್ನು ಬೆಳೆಸಿ ಎಂದು ಹೇಳಿದರು.

ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇಲ್ಲಿಯ ಪ್ರಾಂಶುಪಾಲರಾದ ರಾಮಕೃಷ್ಣ ಬಿ. ಜಿ ಮಾತನಾಡಿ, ಪ್ರತಿಯೊಬ್ಬ ಉಪನ್ಯಾಸಕರು ಸ್ಪಷ್ಟ ಓದು, ಶುದ್ಧ ಭಾಷೆ ಬಳಕೆಯ ಜೊತೆಗೆ ವಿದ್ಯಾರ್ಥಿಗಳಲ್ಲೂ ಅದನ್ನು ಬೆಳೆಸಬೇಕು. ಇಂಥ ಕಾರ್ಯಗಾರಗಳ ಮೂಲಕ ಪಠ್ಯದಲ್ಲಿ ಬಂದಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸರಕಾರಿ ಕಾಲೇಜಿನ ಉಪನ್ಯಾಸಕಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ನಳಿನಾ ದೇವಿ ಎಂ. ಆರ್. ಇವರನ್ನು ಸನ್ಮಾನಿಸಲಾಯಿತು. ಕನ್ನಡದಲ್ಲಿ ಅತ್ಯಧಿಕ ಅಂಕಗಳಿಸಿದ ಸರಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಂಘದ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಕನ್ನಡ ಉಪನ್ಯಾಸಕ ಸಂಘದ ಗೌರವ ಸಲಹೆಗಾರರಾದ ವಿಶ್ವನಾಥ ಕರಬ, ಕನ್ನಡ ಉಪನ್ಯಾಸಕ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಾಸಂತಿ ಅಂಬಾಲಪಾಡಿ ಉಪಸ್ಥಿತರಿದ್ದರು.

ಹಳಗನ್ನಡ ಪಠ್ಯದ ಕುರಿತು ನಿವೃತ್ತ ಪ್ರಾಂಶುಪಾಲರಾದ ಪ್ರೋ. ಎಂ ಬಾಲಕೃಷ್ಣ ಶೆಟ್ಟಿ, ಪ್ರಶ್ನೆ ಪತ್ರಿಕೆಯ ತಯಾರಿಯ ಕುರಿತು ವಿವೇಕ ಪ. ಪೂ. ಕಾ. ಕೋಟ ಇಲ್ಲಿಯ ಉಪನ್ಯಾಸಕರಾದ ಸದಾಶಿವ ಹೊಳ್ಳ, ಹೊಸಗನ್ನಡ ಪಠ್ಯ ದ ಕುರಿತು ಲೇಖಕಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ರೇಖಾ ವಿ. ಬನ್ನಾಡಿ ಉಪನ್ಯಾಸ ನೀಡಿದರು.

ಕನ್ನಡ ಉಪನ್ಯಾಸಕ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಉದಯ ನಾಯ್ಕ ವಂದಿಸಿ, ಸುಜಯಿಂದ್ರ ಹಂದೆ ನಿರೂಪಿಸಿದರು.

Exit mobile version