Kundapra.com ಕುಂದಾಪ್ರ ಡಾಟ್ ಕಾಂ

ಹಿಂದು ಜಾಗರಣ ವೇದಿಕೆ: ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ಗಂಗೊಳ್ಳಿಯಲ್ಲಿ ಗುರುವಾರ ನಡೆಯಿತು.

ಗಂಗೊಳ್ಳಿ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತ ಆದರ್ಶ ಕೆಲ, ನಮಗೆ ಸ್ವಾತಂತ್ರ್ಯ ಸಿಕ್ಕಿದ ಖುಷಿ ಒಂದೆಡೆಯಾದರೆ ಅಖಂಡವಾಗಿದ್ದ ದೇಶವನ್ನು ವಿಭಜಿಸಿರುವ ದು:ಖ ಇನ್ನೊಂದೆಡೆ. ನಮ್ಮ ದೇಶವನ್ನು ಬ್ರಿಟಿಷರು ಮಾತ್ರವಲ್ಲ ಬೇರೆ ಬೇರೆಯವರು ನಮ್ಮ ದೇಶವನ್ನು ಆಳಿ ಒಡೆದು ಆಳುವ ನೀತಿ, ಮತಾಂಧತೆ ಮೊದಲಾದವುಗಳ ಮೂಲಕ ನಮ್ಮ ದೇಶವನ್ನು ಕೂಪಕ್ಕೆ ತಳುವಂತೆ ಮಾಡಿ ಹೋಗಿದ್ದರು.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಮಂದಿ ಬಲಿದಾನ, ತ್ಯಾಗ, ಹೋರಾಟ ನಡೆಸಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟದಕಲ್ಲಿ ಕೆಲವೇ ಕೆಲವು ವ್ಯಕ್ತಿಗಳನ್ನು ಮಾತ್ರ ವೈಭವೀಕರಿಸಲಾಗುತ್ತಿದ್ದು, ನೈಜ ಸ್ವಾತಂತ್ರ್ಯ ಹೋರಾಟಗಾರರು ಮರೆ ಮಾಚಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಭವಿಷ್ಯದಲ್ಲಿ ಆದ ತಪ್ಪುಗಳು ಮುಂದಿನ ದಿನಗಳಲ್ಲಿ ಆಗಬಾರದು ಎಂದಾದರೆ ನಮ್ಮ ಸ್ವಾತಂತ್ರ್ಯದ ಇತಿಹಾಸ ಅಧ್ಯಯನ ಮಾಡಬೇಕಿದೆ. ಹಿಂದು ಸಮಾಜ ಜಾಗೃತಗೊಳ್ಳಬೇಕಿದೆ. ಪ್ರತಿಯೊಬ್ಬರಲ್ಲೂ ದೇಶ ಭಕ್ತಿಯ ಪರಿಕಲ್ಪನೆ ಬೆಳೆಯಬೇಕಿದೆ ಎಂದರು.

ಉದ್ಯಮಿ ಕಾರ್ತಿಕ್ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಮುಖ್ ಶಂಕರ ಕೋಟ, ಹಿಂಜಾವೇ ಗಂಗೊಳ್ಳಿ ಘಟಕ ಸಂಚಾಲಕ ಮೋಹನ ಖಾರ್ವಿ ಉಪಸ್ಥಿತರಿದ್ದರು. ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ದೇವಸ್ಥಾನದ ಬಳಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ರಾಜೇಶ ಸಾರಂಗ್ ಪಂಜಿನ ಮೆರವಣಿಗೆ ಉದ್ಘಾಟಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಂಜಿನ ಮೆರವಣಿಗೆಯು ಗಂಗೊಳ್ಳಿಯ ಕಲೈಕಾರ್ ಮಠ ಶ್ರೀ ನಗರ ಮಹಾಕಾಳಿ ದೇವಸ್ಥಾನದಿಂದ ಹೊರಟು ಮೇಲ್‌ಗಂಗೊಳ್ಳಿಯ ಶ್ರೀ ರಾಮ ಮಂದಿರದವರೆಗೆ ಸಾಗಿ ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಸಮಾಪನಗೊಂಡಿತು.

ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಸಂಚಾಲಕ ಯಶವಂತ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿವೇಕ ಖಾರ್ವಿ ಪ್ರತಿಜ್ಞಾವಿಧಿ ಬೋಧಿಸಿದರು. ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ ಮತ್ತು ಬೈಂದೂರು ಸರ್ಕಲ್ ಇನ್ಸಪೆಕ್ಟರ್ ಸವಿತ್ರತೇಜ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್. ಮತ್ತು ವಿವಿಧ ಠಾಣೆಯ ಉಪನಿರೀಕ್ಷಕರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಗಂಗೊಳ್ಳಿಯಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶಾಸಕರು ಸಭಾಂಗಣದಲ್ಲಿ ಕಾರ್ಯಕರ್ತರ ಮಧ್ಯೆ ನೆಲದ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರಲ್ಲದೆ ಎಲ್ಲಾ ಕಾರ್ಯಕರ್ತರಂತೆ ನಾನೂ ಒಬ್ಬ ಎಂದು ಕಾರ್ಯಕ್ರಮದುದ್ದಕ್ಕೂ ಕಾರ್ಯಕರ್ತರೊಡನೆ ಇದ್ದು ಸರಳತೆ ಮೆರೆದರು.

Exit mobile version