Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶ್ರೀ ಶಾರದಾ ಮಂಟಪದಲ್ಲಿ ಭಾರತ ಮಾತಾ ಪೂಜೆ ಕಾರ್ಯಕ್ರಮ ಉದ್ಘಾಟನೆ

oplus_0

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಬಲಿದಾನ ಮಾಡಿದ ಫಲವಾಗಿ ನಾವಿಂದು ದೇಶದಲ್ಲಿ ಶಾಂತಿಯಿಂದ ಸ್ವತಂತ್ರವಾಗಿ ನೆಲೆಸಲು ಸಾಧ್ಯವಾಗಿದೆ. ನಮ್ಮ ದೇಶ ಬಲಿಷ್ಠವಾಗಿ ಬೆಳೆಯುತ್ತಿದ್ದು, ವಿಶೇಷವಾಗಿ ರಕ್ಷಣಾ ವ್ಯವಸ್ಥೆ ಅತ್ಯಂತ ಸದೃಢವಾಗಿದೆ. ಇತರ ಎಲ್ಲಾ ರಾಷ್ಟ್ರಗಳು ನಮ್ಮ ದೇಶವನ್ನು ನೋಡುವ ಸ್ಥಿತಿಗೆ ಬಂದಿರುವುದು ದೇಶವಾಸಿಗಳಾದ ನಮ್ಮೆಲ್ಲರ ಸೌಭಾಗ್ಯ. ದೇಶದ ಪ್ರತಿಯೊಬ್ಬ ನಾಗರಿಕನು ದೇಶಾಭಿಮಾನ ಬೆಳೆಸಿಕೊಂಡು ದೇಶ ಸೇವೆಗಾಗಿ ಸಂಕಲ್ಪ ಮಾಡಬೇಕಿದೆ ಎಂದು ನಿವೃತ್ತ ಯೋದ ರಾಜೇಶ ಮೊಗವೀರ ಗಂಗೊಳ್ಳಿ ಹೇಳಿದರು.

ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವ – 2024 ಸಮಾರಂಭ, ದೇಶದ 78ನೇ ಸ್ವಾತಂತ್ರ್ಯೋತ್ಸವ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಸಂಭ್ರಮಾಚರಣೆ ಪ್ರಯುಕ್ತ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸಂಜೆ ಜರಗಿದ ಭಾರತ ಮಾತಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಉಡುಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ದಿಕ್ಸೂಚಿ ಭಾಷಣ ಮಾಡಿದರು.

ವಿದ್ಯಾರ್ಥಿಗಳಾದ ಕ್ಷಮಾ ಆರ್. ಆಚಾರ್ಯ, ಶೃತಿ ಎನ್. ಕೆ., ಶ್ರೇಜಸ್, ಪ್ರಾರ್ಥನಾ ಶುಭ ಹಾರೈಸಿದರು. ಸಮಿತಿಯ ಗೌರವಾಧ್ಯಕ್ಷ ಬಿ. ಲಕ್ಷ್ಮೀಕಾಂತ ಮಡಿವಾಳ, ಪ್ರಧಾನ ಕಾರ್ಯದರ್ಶಿ ನಿತಿನ್ ಖಾರ್ವಿ, ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಯು. ದೇವಾಡಿಗ, ಕಾರ್ಯದರ್ಶಿ ಸುಜಾತ ಬಾಬು ಖಾರ್ವಿ, ಸಮಿತಿಯ ಸುವರ್ಣ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಸತೀಶ್ ಜಿ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಧನ್ಯ ಯು. ಕಾರ್ಯಕ್ರಮ ನಿರ್ವಹಿಸಿದರು. ದೀಪಾಲಿ ರಘುವೀರ ಕೆ. ವಂದೇ ಮಾತರಂ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ದ್ವಿಚಕ್ರ ಹಾಗೂ ಲಘು ವಾಹನ ಜಾಥಾ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಬಳಿಯಿಂದ ಹೊರಟು ತ್ರಾಸಿ ಬೈಪಾಸ್ ಮೂಲಕ ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಳಿ ಸಮಾಪನಗೊಂಡಿತು.

Exit mobile version