Kundapra.com ಕುಂದಾಪ್ರ ಡಾಟ್ ಕಾಂ

ಹೈನುಗಾರಿಕೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮಾಡಿದರೆ ರೈತರಿಗೆ ಲಾಭ ನಿಶ್ಚಿತ: ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟಿಸಿ ಕೆ.ಪಿ. ಸುಚರಿತ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಪರಂಪರೆಯಿಂದ ಬಂದ ಹೈನುಗಾರಿಕೆ ಕಸುಬನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಯುವಜನತೆಯ ಮೇಲಿದೆ. ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಬಗೆಯ ಮೌಲ್ಯವರ್ಧಿತ ನಂದಿನಿ ಉತ್ಪನ್ನಗಳ ಮಾರಾಟ, ಪ್ರೋತ್ಸಾಹಧನ, ಗರಿಷ್ಠ ಲಾಭದ ವರ್ಗವಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.

ಅವರು ಗುರುವಾರ ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟಿಸಿ ಮಾತನಾಡಿ ಅವಿಭಜಿತ ದ.ಕ ಜಿಲ್ಲೆಯಲ್ಲಿ 732 ಹಾಲು ಉತ್ಪಾದಕರ ಸಂಘಗಳಿದ್ದು, ರೈತರು ಹೈನುಗಾರಿಕೆಯ ಮೂಲಕ ನೀಡುವ ಹಾಲನ್ನು ಸಂಸ್ಕರಿಸಿ ನಂದಿನಿ ಬ್ರ್ಯಾಂಡ್ ಮೂಲಕ ಮಾರಾಟ ಮಾಡಲಾಗುತ್ತಿದೆ. 150ಕ್ಕೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 1.38ಲೀ ಹಾಲು, 1 ಸಾವಿರ ಲೀ ತುಪ್ಪ, 28 ಸಾವಿರ ಲೀ ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟದಲ್ಲಿ ನಂದಿನಿ ಅಗ್ರಸ್ಥಾನದಲ್ಲಿದೆ. ಉತ್ಪನ್ನಗಳ ಮಾರಾಟದಲ್ಲಿ ಬರುವ ಲಾಭದ ಶೇ.85ರಷ್ಟರನ್ನು ರೈತರಿಗೆ ವರ್ಗಾಯಿಸಿ ಅವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಸಂಸ್ಥೆಯ ನಿರ್ದೇಶಕ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ರೈತರೇ ಹಾಲು ಉತ್ಪಾದಕರ ಸಂಘಗಳ ಮಾಲಿಕರು. ರೈತರು ಹೈನುಗಾರಿಕೆ ಮಾಡಲು ಹಲವು ಪ್ರೋತ್ಸಾಹಕ ಕ್ರಮಗಳನ್ನು ಕೆಎಂಎಫ್ ಕೈಗೊಂಡಿದೆ. ಹೈನುಗಾರರಿಂದ ಗ್ರಾಹಕರ ತನಕ ನಂದಿನಿ ಉತ್ಪನ್ನಗಳು ಕಲಬೆರಕೆ ಇಲ್ಲದೇ ಗುಣಮಟ್ಟದಲ್ಲಿ ಸಂಸ್ಕರಿಸಿ ಮಾರಾಟ ಮಾಡಲಾಗುತ್ತಿದೆ. ಕಾಲಕಾಲಕ್ಕೆ ಮಾರುಕಟ್ಟೆಯ ಬೇಡಿಕೆ ಹಾಗೂ ಅಗತ್ಯತೆಗಳಿಗೆ ಅನುಗುಣವಾಗಿ ನಂದಿನಿ ಉತ್ಪನ್ನಗಳಲ್ಲಿ ಹಲವು ಬದಲಾವಣೆಗಳನ್ನು ತಂದು ರಾಜ್ಯದ ಅಗ್ರಗಣ್ಯ ಬ್ರ್ಯಾಂಡ್ ಆಗಿ ಮಾರ್ಪಾಡಾಗಿದೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ವಿವೇಕ್ ಡಿ., ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್, ನಾವುಂದ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ, ಕೆಎಂಎಫ್ ಉಪ ವ್ಯವಸ್ಥಾಪಕ ಸುಧಾಕರ, ನಂದಿನಿ ಮಿಲ್ಕ್ ಪಾರ್ಲರ್ ನಿರ್ವಾಹಕರಾದ ವೆಂಕಟೇಶ್ ಬಿಲ್ಲವ, ನರಸಿಂಹ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Exit mobile version