Kundapra.com ಕುಂದಾಪ್ರ ಡಾಟ್ ಕಾಂ

ನಾಡದೋಣೆ ಮೀನುಗಾರರ ಸಭೆ: ಬುಲ್‍ಟ್ರಾಲ್‍, ಲೈಟ್‍ ಫಿಶಿಂಗ್‍ ನಿಷೇಧಕ್ಕೆ ಸಚಿವರಿಗೆ ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಬ್ಯೆಂದೂರು ವಲಯ ನಾಡದೋಣಿ ಮೀನುಗಾರರ ಸಂಘ, ಉಪ್ಪುಂದ ಮತ್ತು ಗಂಗೊಳ್ಳಿ  ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಇದರ ಜಂಟಿ ಆಶ್ರಯದಲ್ಲಿ ಶನಿವಾರ ಉಪ್ಪುಂದದಲ್ಲಿ ನಾಡದೋಣಿ ಮೀನುಗಾರರ ಸಭೆ ನಡೆಯಿತು.

 ಮಂಗಳೂರಿನಿಂದ ಕಾರವಾರದ ತನಕ  ಇರುವ ನಾಡದೋಣಿ ಮೀನುಗಾರರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು, ಮೀನು ಮರಿ ಸಂತತಿಗಳು ನಾಶವಾಗುವಂಥ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್‍ಟ್ರಾಲ್‍ ಮತ್ತು ಬೆಳಕು ಮೀನುಗಾರಿಕೆ ನಿಷೇಧ ಮಾಡಬೇಕೆಂಬ ಒಮ್ಮತದ ಅಭಿಪ್ರಾಯಕ್ಕೆ ಬಂದಿರುತ್ತಾರೆ.

ಅದೇ ದಿನ ಮಧ್ಯಾಹ್ನ ಭಟ್ಕಳ ತಾಲೂಕು ಕಛೇರಿಯಲ್ಲಿ ಮಾನ್ಯ ಮೀನುಗಾರಿಕಾ ಸಚಿವ ಎಸ್. ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ, ಮೀನು ಮರಿ ಸಂತತಿಗಳು ನಾಶವಾಗುವಂತಹ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್‍ಟ್ರಾಲ್‍ ಮತ್ತು ಬೆಳಕು ಮೀನುಗಾರಿಕೆಯನ್ನು ನಿಷೇಧ ಮಾಡಬೇಕೆಂಬ ಮನವಿಯನ್ನು ಸಲ್ಲಿಸಲಾಯಿತು.

ಮನವಿಯನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿದ ಸಚಿವರು ಒಂದು ತಿಂಗಳೊಳಗೆ ಈ ವಿಚಾರಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಮತ್ತು ಎಲ್ಲಾ ಮೀನುಗಾರರ ಸಂಘಟನೆಯ ಮುಖಂಡರನ್ನು ಕರೆಸಿ ಸಭೆ ನಡೆಸಿ ಇದಕ್ಕೊಂದು ಸೂಕ್ತ ಪರಿಹಾರವನ್ನು ದೊರಕಿಸಿ ಕೊಡುತ್ತೇನೆಂದು ಭರವಸೆ  ನೀಡಿದರು.

ಈ ಸಭೆಯಲ್ಲಿ ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ನಾಗೇಶ್ ಖಾರ್ವಿ, ಕರಾವಳಿ ಸಾಂಪ್ರದಾಯಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಯಶವಂತ ಖಾರ್ವಿ, ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷರಾದ ಎಸ್. ಮದನ್ ಕುಮಾರ್ ಉಪ್ಪುಂದ, ನವೀನ್ ಚಂದ್ರ ಉಪ್ಪುಂದ, ದಕ್ಷಿಣ ಕನ್ನಡ ಮಂಗಳೂರು ನಾಡ ದೋಣಿ ಮೀನುಗಾರರ ಮುಖಂಡರಾದ ವಸಂತ ಖಾರ್ವಿ,  ಅಶ್ವಥ್ ಕಾಂಚನ್, ಯಾದವ ಸಾಲಿಯಾನ್‍, ಉದಯ ಅಮೀನ್, ಹೆಜಮಾಡಿ ನಾಡ ದೋಣಿ ಮೀನುಗಾರರ ಮುಖಂಡರಾದ ಏಕನಾಥ್ ಕರ್ಕೇರ್, ಮುಕುಂದ ಕುಂದರ್, ಉತ್ತರ ಕನ್ನಡ ನಾಡ ದೋಣಿಯ ಮೀನುಗಾರರ ಮುಖಂಡರಾದ ನಾಗರಾಜ, ಮಂಜುನಾಥ ಖಾರ್ವಿ, ಅಣ್ಣಪ್ಪ ಸೋಮ ಖಾರ್ವಿ, ಸೋಮನಾಥ ಮೊಗೇರ, ನಾಗರಾಜ ಹರಿಕಾಂತ್, ಬಲಿಂದ್ರ ಅಳ್ವೆಗೆದ್ದೆ ಶಿರೂರು, ಅಲ್ಪಸಂಖ್ಯಾತರ ನಾಡ ದೋಣಿ ಮೀನುಗಾರರ ಮುಖಂಡರಾದ ಗಂಗೊಳ್ಳಿ ಅಬ್ದುಲ್ ಅಜೀದ್, ಮರವಂತೆ ಮೀನುಗಾರರ ಮುಖಂಡರಾದ ಸುರೇಶ್ ಖಾರ್ವಿ, ವಾಸುದೇವ್ ಖಾರ್ವಿ, ಶಂಕರ ಎಂ. ಖಾರ್ವಿ ಶೇಖರ್ ಟಿ. ಖಾರ್ವಿ, ಉಪ್ಪುಂದ ಮೀನುಗಾರರ ಮುಖಂಡರಾದ ವೆಂಕಟರಮಣ ಖಾರ್ವಿ, ತಿಮ್ಮಪ್ಪ ಖಾರ್ವಿ, ಬಿ. ರಾಮ ಖಾರ್ವಿ, ನಾಗೇಶ ಖಾರ್ವಿ ಮಡಿಕಲ್, ಮಂಜುನಾಥ ಜಿ. ಖಾರ್ವಿ, ಸುಧಾಕರ ಖಾರ್ವಿ, ಮಹೇಶ್ ನಾವುಂದ ಮತ್ತು ನಾಡದೋಣಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Exit mobile version