Kundapra.com ಕುಂದಾಪ್ರ ಡಾಟ್ ಕಾಂ

ಮೌಢ್ಯವನ್ನು ಮೌಲ್ಯವಾಗಿ ಭಿತ್ತುತ್ತಿರುವುದು ಆತಂಕಕಾರಿ: ಕಥೆಗಾರ ದಯಾನಂದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಒಂದೇ ಭಾಷೆ, ಸಂಸ್ಕೃತಿ, ಜನಾಂಗವೇ ಶ್ರೇಷ್ಠ ಎಂಬ ಭಾವನೆ ಅಪಾಯಕಾರಿ. ಬಹುತ್ವವನ್ನು ಗೌರವಿಸುವುದು ಮುಖ್ಯ. ಮೌಢ್ಯವನ್ನು ಮೌಲ್ಯವಾಗಿ ಭಿತ್ತುತ್ತಿರುವ ವ್ಯವಸ್ಥೆಯ ನಡುವೆ ವೈಚಾರಿಕತೆಯನ್ನು ಬೆಳೆಸುವ ಶಿಕ್ಷಣ, ಸಂಘಟನೆ, ಸಾಹಿತ್ಯ ಇನ್ನಷ್ಟು ಬೇಕಾಗಿದೆ ಎಂದು ಕಥೆಗಾರ ದಯಾನಂದ ಹೇಳಿದರು.

ಅವರು ಮಂಗಳವಾರ ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು ಆಯೋಜಿಸಿದ್ದ 13ನೇ ಡಾ. ಹೆಚ್. ಶಾಂತರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದರು.

ಯುವಜನತೆ ಸಾಹಿತ್ಯ ಹಾಗೂ ಓದಿನಿಂದ ವಿಮುಖರಾಗಿದ್ದಾರೆ ಅನ್ನೋದು ಬಹುಕಾಲದ ಮಾತು. ಆದರೆ ಸಾಹಿತ್ಯದ ಆಸಕ್ತಿ ಇರುವವರು ಎಲ್ಲಾ ಕಾಲದಲ್ಲೂ ಇದ್ದಾರೆ. ಸಾಹಿತ್ಯ ಮಾತ್ರ ವ್ಯಕ್ತಿಯನ್ನು ಚಿಂತನೆಗೆ ಹಚ್ಚುತ್ತದೆ. ಭೌದ್ಧಿಕ ಬೆಳವಣಿಗೆಯ ದಾರಿಯಾಗಿದೆ. ಅಂಬೇಡ್ಕರ್ ಅವರಿಗೆ ಓದು ವಿಮೋಚನೆಯ ಸಾಧ್ಯತೆಯಾಗಿ ಕಂಡಿತ್ತು ಎಂದರು.

ಪ್ರಶಸ್ತಿ ಆಯ್ಕೆ ಸಮಿತಿಯ ತೀರ್ಪುಗಾರರಾಗಿದ್ದ ಪತ್ರಕರ್ತ, ಕಥೆಗಾರ ಡಾ. ಟಿ.ಎಸ್. ಗೊರವ ಗಜೇಂದ್ರಗಡ‌ ಅವರು ಮಾತನಾಡಿ ಬುದ್ಧನ ಕಿವಿ ಕಥಾಸಂಕಲನದ ಕತೆಯಲ್ಲಿ ಬರುವ ಪಾತ್ರಗಳು ಸಾಮಾಜಿಕ ಸನ್ನಿವೇಶ ಮತ್ತು ತುಮುಲಗಳನ್ನು ದುಗುಡ ದುಮ್ಮಾನಗಳನ್ನು ಕಟ್ಟುವ ಗುರಿಯನ್ನು ಹೊಂದಿದೆ. ಕಥಾ ಸಂಕಲನದ ಪ್ರತಿಯೊಂದು ಕಥೆಯು ಮನುಷ್ಯನ ಸಂಕೋಲೆಗಳನ್ನು ಅಲ್ಲಿನ ಹೇಳಲಾಗದ ನಿತ್ಯದ ಹೋರಾಟಕ್ಕೆ ಸಂವೇದನೆಗೆ ಭಾಷೆಯ ರೂಪ ಕೊಟ್ಟಿದೆ. ಅದರಲ್ಲೂ ಜಾತಿ ಲಿಂಗ ತಾರತಮ್ಯ, ಆರ್ಥಿಕ ತಾರತಮ್ಯಗಳು ಅದರಲ್ಲಿನ ಓಲೈಸುವಿಕೆಯ ಪರಿಯನ್ನು ಹೇಳುತ್ತದೆ. ಆರ್ಥಿಕ ಸಬಲರು ದುರ್ಬಲರು ಓಲೈಸುವ ಉಪಾಯಗಳನ್ನು ಸೂಕ್ಷ್ಮವಾಗಿ ಕಥಾಸಂಕಲನವು ಹೇಳುತ್ತದೆ. ಈ ಕಥಾಸಂಕಲನದ ಬಹುಪಾಲು ಕಥೆಗಳು ನಿತ್ಯ ಬದುಕಿನ ವಾಸ್ತವಗಳಿಗೆ ಹಿಡಿದು ಕೈಗನ್ನಡಿಯಾಗಿದೆ ಎಂದರು.

ಇದನ್ನೂ ಓದಿ: ► ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ದಯಾನಂದ ಅವರ “ಬುದ್ಧನ ಕಿವಿ” ಕಥಾ ಸಂಕಲನ ಆಯ್ಕೆ https://kundapraa.com/?p=74976 .

ಬುದ್ಧನ ಕಿವಿ ಕೃತಿಯ ಕಥೆಗಾರ ದಯಾನಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಎಚ್. ಶಾಂತಾರಾಮ ಮತ್ತು ವಿಜಯಲಕ್ಷ್ಮೀ ಶಾಂತಾರಾಮ್ ಶುಭಹಾರೈಸಿದರು. ಕಾಲೇಜಿನ ಹಿರಿಯ ವಿಶ್ವಸ್ಥ ಕೆ. ಶಾತರಾಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ದೇವದಾಸ್ ಕಾಮತ್, ರಾಜೇಂದ್ರ ತೋಳಾರ್, ಯು.ಎಸ್. ಶೆಣೈ, ಪ್ರಶಸ್ತಿ ಸಮಿತಿಯ ವಸಂತ ಬನ್ನಾಡಿ, ಜಾನಕಿ ಬ್ರಹ್ಮಾವರ ಉಪಸ್ಥಿತರಿದ್ದರು.

ಪದವಿ ಕಾಲೇಜು ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕಿ ಡಾ. ರೇಖಾ ವಿ. ಬನ್ನಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ. ಗೊಂಡ ವಂದಿಸಿದರು. ಉಪನ್ಯಾಸಕಿ ಅಕ್ಷತಾ ಸಂತೋಷ್ ಕಥೆಗಾರರ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಶ್ರೀರಕ್ಷಾ ಹಾಗೂ ಸ್ನೇಹಿತರು ಪಾರ್ಥಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.

Exit mobile version