Kundapra.com ಕುಂದಾಪ್ರ ಡಾಟ್ ಕಾಂ

ಸಂತೃಸ್ತ ಕುಟುಂಬಗಳಿಗೆ ಅನ್ಯಾಯವಾಗದಂತೆ ಭೂಸ್ವಾಧೀನಪ್ರಕಿಯೆ ಪೂರ್ಣಗೊಳಿಸಿ: ಸಂಸದ ಬಿ.ವೈ. ರಾಘವೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ರಾಷ್ಟ್ರೀಯ ಹೆದ್ದಾರಿ 766ಸಿ ದ್ವಿಪಥ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ಎರಡು ವರ್ಷ ಕಳೆದಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಬೈಂದೂರು ಕ್ಷೇತ್ರ ವ್ಯಾಪ್ತಿಯ ಕೊಲ್ಲೂರಿನಿಂದ ಯಡ್ತರೆ ತನಕ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ಆರಂಭಿಸಲು ಹಿನ್ನಡೆಯಾಗಿದೆ. ಸಂಬAಧಿತ ಇಲಾಖೆ ಈ ಬಗ್ಗೆ ವಿಶೇಷ ಮುತುರ್ವಜಿವಹಿಸಿ, ರೈತರಿಗೆ ಯಾವುದೇ ಅನ್ಯಾಯವಾಗದಂತೆ ಗರಿಷ್ಠ ಪರಿಹಾರ ನೀಡುವ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Video

ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 766ಸಿ ಭೂಸ್ವಾಧೀನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ದ್ವಿಪಥ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡ ಸಂಸದರು, ರೈತರು ತಮ್ಮ ಭೂಮಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅದಕ್ಕೆ ಬೆಲೆಕಟ್ಟಲಾಗದು. ಆದರೆ ಅಭಿವೃದ್ಧಿ ಕಾರ್ಯ ನಡೆಯಬೇಕಾದರೆ ಭೂಮಿ ಅಗತ್ಯವಾಗಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಅನಿವಾರ್ಯವಾಗಿದೆ. ಸಂತೃಸ್ತ ಕುಟುಂಬಗಳಿಗೆ ಸರ್ಕಾರದ ಮಾನದಂಡದಂತೆ ಗರಿಷ್ಠ ಪರಿಹಾರ ವಿತರಿಸಲಾಗುತ್ತದೆ. ಈ ಬಗ್ಗೆ ರೈತರು ನಮ್ಮದೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಭೂಸ್ವಾಧೀನಕ್ಕೆ ಪ್ರತ್ಯೇಕ ಸಮಿತಿ ರಚನೆ:
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಗೊಂದಲದಿಂದಾಗಿ ಹಲವು ಸಂತೃಸ್ತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಇಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯ ಬಗ್ಗೆ ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದರು, ಈ ಸಮಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು, ಭೂ ಸ್ವಾಧೀನಾಧಿಕಾರಿ, ತೋಟಗಾರಿಕೆ, ಸಬ್‌ರಿಜಿಸ್ಟರ್ ಸೇರಿದಂತೆ ಸಂಬಂಧಿತ ಇಲಾಖೆಯ ಹಿರಿಯ ಅಧಿಕಾರಿಗಳಿದ್ದು, ಅವರ ನೇತೃತ್ವದಲ್ಲಿ ಜಂಟಿ ಸರ್ವೆಕಾರ್ಯ ನಡೆಸಿ, ಶೀಘ್ರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.

ಪರಿಹಾರ ಪ್ರಮಾಣ:
ರಾಷ್ಟ್ರೀಯ ಹೆದ್ದಾರಿಗಾಗಿ ಭೂಮಿ, ಕಟ್ಟಡ, ತೋಟ ಹಾಗೂ ಮರಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದ ಮಾನದಂಡದಂತೆ ಪರಿಹಾರ ಒದಗಿಸಲಾಗುತ್ತದೆ, ಸಂಬಂಧಿತ ಇಲಾಖೆ ಸಿದ್ಧಪಡಿಸಿದ ನಷ್ಟದ ಅಂದಾಜು ಪಟ್ಟಿಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೌಲ್ಯದ ಎರಡು ಪಟ್ಟು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ 5ಕಿ.ಮೀ. ದೂರದವರೆಗೆ ಮೂರು ಪಟ್ಟು ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಲ್ಕು ಪಟ್ಟು ಪರಿಹಾರ ವಿತರಿಸಲಾಗುತ್ತದೆ. ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಡ್ತರೆಯಿಂದ ಸುಮಾರು 3.8ಕಿ.ಮೀ ದೂರದವರೆಗೆ ರಸ್ತೆಯ ಎರಡು ಭಾಗದಲ್ಲಿ ತಲಾ 8ಮೀ ಹಾಗೂ ಬಳಿಕ ಹಾಲ್ಕಲ್ ವರೆಗೆ ರಸ್ತೆಯ ಎರಡು ಭಾಗದಲ್ಲಿ ತಲಾ 15ಮೀ. ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ, ಎನ್‌.ಎಚ್ ಇಲಾಖಾ ಅಧಿಕಾರಿಗಳು, ಡಿಎಫ್‌ಓ, ಕುಂದಾಪುರ ಸಹಾಯಕ ಕಮೀಷನರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version