Kundapra.com ಕುಂದಾಪ್ರ ಡಾಟ್ ಕಾಂ

ವಾರಾಹಿ ಯೋಜನೆ ಪೂರ್ಣ ಜಾರಿಗೆ ಹೋರಾಟದ ದಾರಿ ಅನಿವಾರ್ಯ: ಶಾಸಕ ಗುರುರಾಜ ಗಂಟಿಹೊಳೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಾರಾಹಿಯಂತಹ ನೀರಾವರಿ ಯೋಜನೆ ಬೈಂದೂರು ಕ್ಷೇತ್ರದಲ್ಲಿ ಇದ್ದೂ ಕೂಡ ಇಲ್ಲಿನ ಜನರು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಪರಿಪಾಟಲು ಪಡುವಂತಾಗಿದೆ. ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾರಾಹಿ ಬಲದಂಡೆ ಯೋಜನೆ ಕಾಮಗಾರಿಯನ್ನು ಕೈಗೆತ್ತುಕೊಳ್ಳುವಲ್ಲಿ ಹಾಗೂ ಬೈಂದೂರು ಕ್ಷೇತ್ರದಾದ್ಯಂತ ವಾರಾಹಿ ನೀರು ದೊರೆಯುವಲ್ಲಿ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂಬಂತಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಗುರುವಾರ ಇಲ್ಲಿನ ಆಡಳಿತದ ಸೌಧದಲ್ಲಿ ವಾರಾಹಿ ಬಲದಂಡೆ ಯೋಜನೆ, ಕಸ್ತೂರಿ ರಂಗನ್ ವರದಿ ಹಾಗೂ ಸಿಆರ್‌ಝಡ್ ಸಮಸ್ಯೆಗಳ ಪರಿಹಾರಕ್ಕಿರುವ ಮಾರ್ಗಗಳ ಬಗ್ಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆದ ಮಾಹಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಾರಾಹಿ ಯೋಜನೆಯಿಂದ ಹಲವು ಭಾಗಗಳು ವಂಚಿತ, ಭಾಗಶಃ ವಂಚಿತ ಹಾಗೂ ಸಂತ್ರಸ್ಥ ಗ್ರಾಮಗಳಾಗಿದ್ದು ಎಲ್ಲಾ ಭಾಗಕ್ಕೂ ನೀರು ದೊರೆಕಿಸಿಕೊಡುವ ಅಗತ್ಯವಿದೆ. ಯೋಜನೆ ನೆನೆಗುದಿಗೆ ಬೀಳಲು ಅರಣ್ಯ ಇಲಾಖೆಯ ತಾಂತ್ರಿಕ ತೊಂದರೆಗಳೇ ಕಾರಣ ಎಂಬ ಆರೋಪ ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೆ ಅದಕ್ಕೆ ಸ್ಪಷ್ಟ ಪರಿಹಾರ ಕಂಡುಕೊಳ್ಳಲು ಈತನಕ ಸಾಧ್ಯವಾಗಿಲ್ಲ. ಕಳೆದ 30 ವರ್ಷಗಳಿಂದ ಕಾರಣ ಹೇಳಿಕೊಂಡು ನೆನೆಗುದಿಗೆ ಬಿದ್ದಿರುವ ಯೋಜನೆ ಕಾರ್ಯರೂಪಕ್ಕೆ ತರಲು ಹೋರಾಟವೇ ಸೂಕ್ತ ಎಂಬ ಭಾವನೆ ಜನರಲ್ಲಿದೆ ಎಂದರು.

ಕೆಪಿಸಿ ಪ್ರಾಜೆಕ್ಟ್ ಹೆಡ್ ಮಹೇಶ್ ಅವರು ಮಾತನಾಡಿ ಕೆಪಿಸಿ ಯೋಜನೆ ಆರಂಭವಾಗದಲೇ ಅರಣ್ಯ ಇಲಾಖೆ ಬದಲು ಭೂಮಿ ನೀಡಿ ಯೋಜನೆ ಕಾರ್ಯಗತಗೊಳಿಸಲಾಗಿತ್ತು. ಆದಾಗ್ಯೂ ಈತನಕವೂ ಅರಣ್ಯ ಇಲಾಖೆ ಕೆಪಿಸಿ ಯೋಜನೆ ಇರುವ ಪ್ರದೇಶವನ್ನು ವಿರಹಿತಗೊಳಿಸದೇ ಯೋಜನೆ ಕಾರ್ಯರೂಪಗೊಳಸಲು ಅಡ್ಡಿಪಡಿಸುತ್ತಿದೆ ಎಂದರು.

ಕಸ್ತೂರಿ ರಂಗನ್ ಯೋಜನೆಯು ಬೈಂದೂರು ಕ್ಷೇತ್ರದ ಮಲೆನಾಡು ಪ್ರದೇಶದ ಬಹುತೇಕ ಗ್ರಾಮಗಳನ್ನು ಒಳಗೊಂಡಿದ್ದು, ಯೋಜನೆ ಜಾರಿಯ ಬಗ್ಗೆ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಬಗ್ಗೆಯೂ ಮಾಹಿತಿ ಒದಗಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ವನ್ಯಜೀವಿ ವಿಭಾಗದ ಎಸಿಎಫ್ ದಿನೇಶ್ ಪ್ರತಿಕ್ರಿಯಿಸಿ, ಸರಕಾರಿ ಯೋಜನೆಗಳಿಗೆ ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿಲ್ಲ. ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ವಾರಾಹಿ ಹಾಗೂ ಕೆಪಿಸಿ ಯೋಜನೆಗಳ ಕಾರ್ಯರೂಪಕ್ಕೆ ಅಡ್ಡಿಯಾಗಿದ್ದರೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ಬಗ್ಗೆ ಅವರು ಪ್ರತಿಕ್ರಿಯಿಸಿ, ಅರಣ್ಯ ಅಭಯಾರಣ್ಯದಿಂದ ಗರಿಷ್ಠ 10ಕಿ.ಮೀ ತನಕ ಅತಿಸೂಕ್ಷ್ಮ ವಲಯವೆಂದು ಅರಣ್ಯ ಇಲಾಖೆ ಗುರುತಿಸಿದ್ದರೂ, ಜನವಸತಿ ಪ್ರದೇಶವನ್ನು ಗಮನಿಸಿಕೊಂಡು ಕೆಲವೆಡೆ ಮಿತಿಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲ. ಕಸ್ತೂರಿ ರಂಗನ್ ವರದಿಯಲ್ಲಿ ಅತಿಸೂಕ್ಷ್ಮ ಪ್ರದೇಶವೆಂದು ಇಡಿ ಗ್ರಾಮವನ್ನೇ ಗುರುತಿಸಿದ್ದು ಈ ಬಗ್ಗೆ ಪರಿಸರ ಇಲಾಖೆ ಅಧಿಕಾರಿಗಳೇ ಸ್ಪಷ್ಟೀಕರಣ ನೀಡಬೇಕಾಗಿದೆ ಎಂದರು.

ವಾರಾಹಿ ಸಹಾಯಕ ಇಂಜಿನಿಯರ್ ಕಿರಣ್ ವಾರಾಹಿ ಯೋಜನೆ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ರಾಮಲಿಂಗ ಅವರು ಸಿಆರ್‌ಝಡ್ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಕೊಲ್ಲೂರು ವನ್ಯಜೀವಿ ವಿಭಾಗದ ಆರ್‌ಎಫ್ ಕಿರಣ್ ಬಾಬು, ಬೈಂದೂರು ಆರ್‌ಎಫ್‌ಓ ಸಂದೇಶ್, ಕುಂದಾಪುರ ಆರ್‌ಎಫ್‌ಓ ರಾಘವೇಂದ್ರ ನಾಯ್ಕ್, ಸಿದ್ದಾಪುರ ಆರ್‌ಎಫ್‌ಓ ಜಿವಿ ನಾಯಕ್, ಶಂಕರನಾರಾಯಣ ಆರ್‌ಎಫ್‌ಓ ಜ್ಯೋತಿ ಉಪಸ್ಥಿತರಿದ್ದರು.

Exit mobile version