Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ದಿಗ್ವಿಜಯ ಮಹೋತ್ಸವ. ಅದ್ದೂರಿ ಮೆರವಣಿಗೆ

ಕುಂದಾಪುರ: ಇಲ್ಲಿನ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸವನ್ನಾಚರಿಸುತ್ತಿರುವ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವದ ಪುರಮೆರವಣಿಗೆ ಸಂಜೆ ದೇವಳದಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಆರಂಭಗೊಂಡಿತು.

ವಿಶೇಷವಾಗಿ ಪುಷ್ಪಲಂಕಾರಗೊಂಡ ವಾಹನದಲ್ಲಿ ಶ್ರೀಗಳು ವಿರಾಜಮಾನರಾದರು. ವೇದ ಘೋಷಗಳಿಂದ ಆರಂಭವಾದ ಪುರ ಮೆರವಣಿಯಲ್ಲಿ ವೆಂಕಟರಮಣ, ಆಂಜನೇಯ, ನರಸಿಂಹ ಅವತಾರ, ಕಂಸ ವಧೆ, ವೇದವ್ಯಾಸ ದೇವರು, ತಾರಕಾಸುರ ವಧೆ, ಸಂಜೀವಿನಿ ಪರ್ವತ ಹೊತ್ತ ಹನುಮಂತ, ದುರ್ಗೆ, ಮಕ್ಕಳ ಶ್ರೀ ರಾಮ ಸೀತಾ ಲಕ್ಷ್ಮಣ ಹನುಮಂತ, ವೆಂಕಟರಮಣ ದೇವರು, ಇದಲ್ಲದೆ ಕೀಲು ಕುದುರೆ, ನಾಸಿಕ್ ಬ್ಯಾಂಡ್, ಮಹಿಳಾ ಚಂಡೆ, ಹುಲಿವೇಷ ಅಲ್ಲದೇ ಇನ್ನಿತರ ಟ್ಯಾಬ್ಲೋಗಳು ಜನರ ಮನಸೂರೆಗೊಂಡಿತು. ಸುಮಾರು 10000ಕ್ಕೂ ಹೆಚ್ಚಿನ ಜಿ.ಎಸ್.ಬಿ ಸಮಾಜ ಭಾಂದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಪುಳಕಿತರಾದರು. ಊರ ಹಾಗೂ ಪರವೂರಿನ ಭಕ್ತಾದಿಗಳು ಸ್ವಾಮೀಜಿಯಿಂದ ಫಲ ಮಂತ್ರಾಕ್ಷತೆಯನ್ನು ಪಡೆದರು. ಕೋಟೇಶ್ವರ ಪೇಟೆಯಲ್ಲಿ ವಿದ್ಯುತ್ ದೀಪಗಳ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಕುರುಕ್ಷೇತ್ರ ಮೈದಾನದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.

Exit mobile version