Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಹಾಗೂ ಸಾಧನಾ ಐಎಎಸ್ ಅಕಾಡೆಮಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಸಂಘಟಿತ ತರಬೇತಿ ಕೇಂದ್ರ ಆರಂಭ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಯಾವುದೇ ವಿಷಯದಲ್ಲಿ ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಹಾಗೂ ಕೆಪಿಎಸ್ಸಿಯ- ಪೂರ್ವಭಾವಿ (ಪ್ರೀಲಿಮ್ಸ್) ಹಾಗೂ ಮುಖ್ಯ ಪರೀಕ್ಷೆಗಳಿಗೆ (ಮೈನ್ಸ್) 9 ತಿಂಗಳ ನಿರಂತರ ಸನಿವಾಸ ತರಬೇತಿಯನ್ನು ನೀಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟರ್‌ನೊಂದಿಗೆ ಈಗಾಗಲೆ ಒಡಂಬಡಿಕೆ ಮಾಡಿಕೊಂಡಿದ್ದು, ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ಉತ್ತಮ ಗುಣಮಟ್ಟದ, ಅತ್ಯುತ್ತಮ ತರಬೇತಿಯನ್ನು ನೀಡಲು ಉದ್ದೇಶಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದರು.

ಈ ತರಬೇತಿಯು ಎಸ್‌ಡಿಎ, ಎಫ್‌ಡಿಎ, ಬ್ಯಾಂಕಿಂಗ್, ಪೋಲೀಸ್ ಇಲಾಖೆ, ಪಿಡಿಒ, ಕಂದಾಯ ಇಲಾಖೆಗಳ ಪರೀಕ್ಷೆಗಳು ಸೇರಿದಂತೆ ಇನ್ನಿತರ ಎಲ್ಲಾ ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯ ಪರೀಕ್ಷೆಗಳನ್ನು ಎದುರಿಸಲು ಅನುವುಮಾಡಿಕೊಡಲಿದೆ. ಕಾಲ ಕಾಲಕ್ಕೆ ಬರುವ ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳಿಗೆ ತಯಾರುಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿನೂತನ ಪ್ರಯತ್ನಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸಾಧನಾ ಕೋಚಿಂಗ್ ಅಕಾಡೆಮಿ ಮುಂದಾಗಿದೆ ಎಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೇ ಪದವಿಪೂರ್ವ ಹಾಗೂ ಪದವಿ ವಿದ್ಯಾಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಪ್ರಸ್ತುತ ವರ್ಷದಿಂದ ಪದವಿ ಮುಗಿಸಿರುವವರಿಗೆ 9 ತಿಂಗಳ ಕಾಲದ ನಿರಂತರ ತರಬೇತಿ ಹಾಗೂ ದೈನಂದಿನ ಅಭ್ಯಾಸ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ. ಮಹಾನಗರಗಳಿಗೆ ಮಾತ್ರ ಸೀಮಿತವಾಗಿರುವ ಈ ರೀತಿಯ ತರಬೇತಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಸಾಕಾರಗೊಳ್ಳುತ್ತಿದೆ.

ಈಗಾಗಲೇ ನೀಟ್, ಸಿಇಟಿ, ಸಿಎ, ಸಿಎಸ್, ಜೆಇಇ, ಎಸಿಸಿಎ, ಸಿಎಂಎಯಂತಹ ವೃತ್ತಿನಿರತ ಕೋರ್ಸಗಳ ತರಬೇತಿಗಳಲ್ಲಿ ಯಶಸ್ವಿಯಾಗಿ ನಡೆಸಿ, ಅತೀ ಉತ್ತಮ ಫಲಿತಾಂಶವನ್ನು ಆಳ್ವಾಸ್ ದಾಖಲಿಸುತ್ತಾ ಬಂದಿದೆ. ಸರ್ಕಾರಿವಲಯದ ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ಹಾಗೂ ಅಭ್ಯರ್ಥಿಗಳನ್ನು ತರಬೇತಿಗೊಳಿಸುವ ವ್ಯವಸ್ಥೆಯನ್ನು ಒದಗಿಸುವುದರ ಮೂಲಕ ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಿಂದ  ಹೆಚ್ಚು ಸರ್ಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯ ಲಭಿಸಲಿದೆ. 

ನಿರಂತರ ತರಬೇತಿಯ ಜೊತೆಯಲ್ಲಿ ಮಾದರಿ ಪರೀಕ್ಷೆಗಳು, ಸಂದರ್ಶನ ಎದುರಿಸುವ ಕಲೆ ಹಾಗೂ ಸೈಕೋಮ್ಯಾಟ್ರಿಕ್ ಟೆಸ್ಟ್‌ಗಳು ನಡೆಯಲಿವೆ. ದ್ವಿಭಾಷಾ ಬೋಧನಾ ಮಾಧ್ಯಮದಲ್ಲಿ (ಕನ್ನಡ ಹಾಗೂ ಇಂಗ್ಲೀಷ್) ತರಗತಿಗಳು ನಡೆಯಲಿದ್ದು, ಅಧ್ಯಯನ ಸಾಮಾಗ್ರಿಗಳು, ವಿದ್ಯುನ್ಮಾನ ಪ್ರತಿಗಳನ್ನು ಒದಗಿಸಲಾಗುವುದು. ಅನುಭವಿ ಶಿಕ್ಷಕರ ತಂಡ ತರಬೇತಿಯ ಜೊತೆಯಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆ ಉತ್ತೀರ್ಣರಾದ ಅಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡಲಿದ್ದಾರೆ.

ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ  ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಿ ಸಮಾಜದ ಉನ್ನತ ಸ್ಥಾನಕ್ಕೆ ತರುವ ಉದ್ದೇಶ- ಸಾಧನಾ ಹಾಗೂ ಆಳ್ವಾಸ್ ಸಂಸ್ಥೆಯದ್ದಾಗಿದೆ- ಡಾ ಜ್ಯೋತಿ, ನಿರ್ದೇಶಕರು, ಸಾಧನಾ ಐಎಎಸ್ ಕೋಚಿಂಗ್ ಸೆಂಟರ್, ಬೆಂಗಳೂರು.

ಆಕ್ಟೋಬರ್‌ನ ಮೊದಲ ವಾರದಲ್ಲಿ ತರಗತಿಗಳು ಆರಂಭವಾಗಲಿದ್ದು, ಈಗಾಗಲೇ ನೋಂದಾಣಿ ಪ್ರಕ್ರಿಯೆ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ: 9480105446, 7259006116, 9740668967, 9902488801

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್, ಸಾಧನಾ ಐಎಎಸ್ ಕೋಚಿಂಗ್ ಸೆಂಟರ್‌ನ ನಿರ್ದೇಶಕಿ ಡಾ ಜ್ಯೋತಿ ಇದ್ದರು. 

Exit mobile version