Kundapra.com ಕುಂದಾಪ್ರ ಡಾಟ್ ಕಾಂ

ಮೈಸೂರು ಸಂಸ್ಥಾನದ ಕೊಡುಗೆ ಅಪಾರ: ಧರ್ಮೇಂದ್ರ ಕುಮಾರ್  

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದರೆ:
ಕಡ್ಡಾಯ ಶಿಕ್ಷಣ ಹಾಗೂ ವಯಸ್ಕರ ಶಿಕ್ಷಣ ಜಾರಿ  ಹೆಣ್ಣುಮಕ್ಕಳಿಗೆ ಶಾಲೆ ಆರಂಭ, ಶೇ100 ಪರಿಶುದ್ಧ ಶ್ರೀಗಂಧದ ಎಣ್ಣೆಯ ಸಾಬೂನು (ಮೈಸೂರು ಸ್ಯಾಂಡಲ್ ಸೋಪ್) ಉತ್ಪಾದನೆ, ಭಾರತದ ಮೊಟ್ಟಮೊದಲ ಚುನಾವಣೆ, ಮೊದಲ ವಿಮಾನ ನಿರ್ಮಾಣ, ಕುಟುಂಬ ಕಲ್ಯಾಣ ಯೋಜನೆ ಜಾರಿಗೊಳಿಸಿದ ಹೆಗ್ಗಳಿಕೆ ಮೈಸೂರಿನ ನಾಲ್ವಡಿ ಕೃ?ರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಸಿವಿಲ್ ಎಂಜಿನಿಯರ್, ಮೆಟ್ರೋ ಪೊಲಿಟನ್ ಇತಿಹಾಸಕಾರ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂವೆನ್ಸರ್ ಧರ್ಮೇಂದ್ರ ಕುಮಾರ್ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ’ರೋಸ್ಟ್ರಮ್- ವಾಗ್ಮಿಗಳ ವೇದಿಕೆ’ ವತಿಯಿಂದ ಮಂಗಳವಾರ ನಡೆದ ’ಕರ್ನಾಟಕದ ಇತಿಹಾಸ’ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ವಿದ್ಯೆಗೆ ನೀಡಿದ ಪ್ರಾಮುಖ್ಯತೆ, ಪರಿಚಯಿಸಿದ ಲಸಿಕೆ, ಕುರುಡರಿಗಾಗಿ ಬ್ರೈಲ್ ಲಿಪಿ ತಂದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.

ಕನ್ನಂಬಾಡಿ ಕಟ್ಟೆಯ ನಿರ್ಮಾಣ, ಮಹಾಯುದ್ಧದ ಖರ್ಚು ಭರಿಸಿರುವುದು, ಸ್ವಾತಂತ್ರ್ಯದತ್ತ ಇಟ್ಟ ಹೆಜ್ಜೆ, ಸ್ವತಂತ್ರ ಭಾರತದಲ್ಲಿ ಸರ್ಕಾರ ರಚನೆಗೆ 30 ಅರಮನೆಗಳನ್ನು ಉಚಿತವಾಗಿ ನೀಡಿರುವ ಮೈಸೂರು ಸಂಸ್ಥಾನದ ಕಾರ್ಯ ಪ್ರಶಂಸನೀಯ ಎಂದು ಅವರು ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಖಾಸಗಿ ಪೈಲಟ್ ಜೆಟ್ ಅನ್ನು ಉಡುಗೊರೆಯಾಗಿ ನೀಡಿದ ಮಹಾನುಭಾವ ನಾಲ್ವಡಿ ಕೃ?ರಾಜ ಒಡೆಯರ್. ದೇಶದ ಪ್ರಗತಿಗಾಗಿ ಇವರು ನೀಡಿದ ಅಮೋಘ ಕೊಡುಗೆಗಳು ಹೆಮ್ಮೆಯ ಕನ್ನಡಿಗರಾಗಲು ಪ್ರೇರಣೆ ನೀಡುವಂತಿದೆ ಎಂದರು.

ದಾಖಲೆ ಅಥವಾ ಸಾಕ್ಷ್ಯ ಇಲ್ಲದ ಇತಿಹಾಸವನ್ನು ಒಪ್ಪಿಕೊಳ್ಳಬಾರದು. ಯಾವುದೇ  ಐತಿಹಾಸಿಕ ಘಟನೆಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿ, ಮುಂದಿನ ಪೀಳಿಗೆಗೆ ತಿಳಿಸುವುದು ಉತ್ತಮ. ಹೆಚ್ಚು ಓದಬೇಕು ಅದರೊಂದಿಗೆ ಅನುಭವಿಸಬೇಕು ಎಂದು ಅವರು ಸಲಹೆ ನೀಡಿದರು.

ದೇಶೀಯ ರಾಜರು ಆರಂಭಿಸಿದ ಮೊದಲ ಮೈಸೂರು ವಿಶ್ವವಿದ್ಯಾಲಯವು ರಾಜ್ಯಕ್ಕೆ ಮಹತ್ತರವಾದ ಕೊಡುಗೆ ನೀಡುತ್ತಾ ಬಂದಿದೆ. ದೇಶದ ಏಳ್ಗೆಗಾಗಿ ಶ್ರಮಿಸಿದ ಮೈಸೂರು ಸಂಸ್ಥಾನಕ್ಕೆ ಗೌರವ ನೀಡುವುದು ನಮ್ಮ ಮೊದಲ ಆದ್ಯತೆ ಎಂದರು. ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ವಿದ್ಯಾರ್ಥಿನಿ ಶ್ರೀವಲ್ಲಿ ಸೈದೂರು ಕಾರ್ಯಕ್ರಮ ನಡೆಸಿಕೊಟ್ಟರು.

Exit mobile version