ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಬೈಂದೂರು, ರಾಮಕ್ಷತ್ರಿಯ ಸಮಾಜ ಬೈಂದೂರು, ರಾಮಕ್ಷತ್ರಿಯ ಮಾತೃ ಮಂಡಳಿ ಬೈಂದೂರು ಹಾಗೂ ರಾಮಕ್ಷತ್ರಿಯ ಯುವಕ ಸಮಾಜ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಹಾಗೂ ಪುರಸಭಾ ಮಾಜಿ ಅಧ್ಯಕ್ಷರಾದ ಹೊಸಾಡು ಸುಬ್ರಾಯ ಶೇರುಗಾರ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ರಾಮಕ್ಷತ್ರಿಯ ಸಮುದಾಯದಲ್ಲಿ ಜನಿಸಿದ ಇಬ್ಬರು ಮಹನೀಯರು ಸಮುದಾಯ ಹಾಗೂ ಸಮಾಜದಲ್ಲಿ ತಮ್ಮ ಅವಿರತ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು. ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಅವರು ಕಷ್ಟದಿಂದ ಓದಿ ಸರಕಾರಿ ಉದ್ಯೋಗ ಪಡೆದ ಬಳಿಕವೂ ಉನ್ನತವಾದುದನ್ನು ಸಾಧಿಸಬೇಕು ಎಂಬ ಛಲದಿಂದ ಸ್ವಂತ ಉದ್ಯಮ ಸ್ಥಾಪಿಸಿ ಹೆಸರು ಮಾಡಿದ್ದರು. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದು ಒಂದು ಭಾರಿ ಬೈಂದೂರು ಕ್ಷೇತ್ರದ ಶಾಸಕರಾಗಿ ಅಲ್ಲಿಯೂ ಧೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಯೋಜನೆ ಹಾಗೂ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಹೊಸಾಡು ಸುಬ್ರಾಯ ಶೇರುಗಾರ್ ಅವರು ಉತ್ತಮ ಸಂಘಟನಾ ಚತುರರಾಗಿದ್ದರು. ನಾಯಕರು ಹಾಗೂ ಜನಸಾಮಾನ್ಯರ ನಡುವೆ ಕೊಂಡಿಯಾಗಿದ್ದುಕೊಂಡು ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಉದ್ಯಮದೊಂದಿಗೆ ರಾಜಕೀಯದಲ್ಲಿಯೂ ತನ್ನದೇ ಆದ ಅಸ್ತಿತ್ವವನ್ನು ತೋರ್ಪಡಿಸಿ ಬೈಂದೂರು ಅಭಿವೃದ್ಧಿಯಲ್ಲಿ ಶ್ರಮಿಸಿದ್ದರು ಎಂದರು.
ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ರಾಮಕೃಷ್ಣ ಸಿ., ಮಾತೃ ಮಂಡಳಿ ಅಧ್ಯಕ್ಷರಾದ ಗಾಯತ್ರಿ ರಾಮ ಸೊಡಿತಾರ್, ಯುವಕ ಸಮಾಜದ ಕಾರ್ಯದರ್ಶಿ ರಾಜೇಶ್ ಎನ್. ಉಪಸ್ಥಿತರಿದ್ದರು. ಶ್ರೀರಾಮ ವಿವಿದೋದ್ದೇಶ ಟ್ರಸ್ಟ್ ಇದರ ಸಂಚಾಲಕರಾದ ಆನಂದ್ ಮದ್ದೋಡಿ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ಅಗಲಿದ ಚೇತನಗಳ ಜೀವನಗಾಧೆಯನ್ನು ಪರಿಚಯಿಸಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸದಾಶಿವ ಡಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಮಾಜಿ ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸುರೇಶ್ ಬಡಿವಾಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಮಾಲಿನಿ ಕೆ. ಮಯ್ಯಾಡಿ, ಮಾಜಿ ಸದಸ್ಯರಾದ ರಾಮ ಸೋಡಿತಾರ್, ಉದ್ಯಮಿಗಳಾದ ವೆಂಕಟರಮಣ ಬಿಜೂರು, ಗೋಪಾಲಕೃಷ್ಣ ಕಲ್ಮಕ್ಕಿ, ರಾಮಕ್ಷತ್ರಿಯ ಸಂಘದ ಮಾಜಿ ಕಾರ್ಯದರ್ಶಿಗಳಾದ ಆನಂದ ಎಂ.ಪಿ. ರಾಮದಾಸ್ ಜಿ ಬೆಂಗಳೂರು ಮೊದಲಾದವರು ಮೃತರನ್ನು ಸ್ಮರಿಸಿ ಕಂಬನಿ ಮಿಡಿದರು.
ಅಗಲಿದ ಹಿರಿಯ ಚೇತನಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.