ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಶ್ರೀ ಸೀತಾರಾಮಚಂದ್ರ ದೇವಸ್ಥಾನದ 38ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭ ಅ.09ರಿಂದ 12ರ ತನಕ ವಿಜೃಂಭಣೆಯಿಂದ ಜರುಗಲಿದೆ.
ಅ.09ರಂದು ಬೆಳಿಗ್ಗೆ ಶ್ರೀ ಶಾರದಾಂಬೆಯನ್ನು ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಿದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ.10ರಂದು ನವಚಂಡಿಕಾ ಯಾಗ ಹಾಗೂ ಅ.11ರಂದು ನವಚಂಡಿಕಾಯಾಗದ ಅಂಗವಾಗಿ ಅನ್ನಸಂತರ್ಪಣೆ ನಡೆಯಲಿದ್ದು, ಅ.12ರಂದು ಶ್ರೀ ಶಾರದಾ ಮೂರ್ತಿಯ ವೈಭವದ ವಿಸರ್ಜನಾ ಮೆರವಣಿಗೆ ಜರುಗಲಿದೆ.
ಶಾರದೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳ ಜರುಗಲಿದ್ದು, ಅ.09ರ ಬುಧವಾರ ಮಧ್ಯಾಹ್ನ 2:30ರಿಂದ ಭಕ್ತಿಗೀತೆ, ರಂಗೋಲಿ, ಹೂಮಾಲೆ ಕಟ್ಟುವ ಸ್ಪರ್ಧೆ, ಭಗವದ್ಗೀತಾ ಪಠಣ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 5ರಿಂದ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ. ಅ.11ರಂದು ರಾಮಕ್ಷತ್ರಿಯ ಸಾಂಸ್ಕೃತಿಕ ವೈಭವ ಸ್ಪರ್ಧೆ ಜರುಗಲಿದೆ. ಅ.10ರಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅರೆಹೊಳೆ ಪ್ರತಿಷ್ಠಾನದ ಬಿಡುವನೇ ಬ್ರಹ್ಮಲಿಂಗ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.
ಅ.10 ಹಾಗೂ 11ರ ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಅತಿಥಿ ಗಣ್ಯರು ಭಾಗವಹಿಸಲಿದ್ದು, ಸಾಧಕರಿಗೆ ಸನ್ಮಾನ, ಕ್ರೀಡಾ ಸ್ಪರ್ಧೆಯನ್ನು ಒಳಗೊಂಡಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮೊದಲಾದ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ ಅಧ್ಯಕ್ಷ ರವೀಂದ್ರ ಸೋಡಿತಾರ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಶ್ ನೀಳಪ್ಪನಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.