Kundapra.com ಕುಂದಾಪ್ರ ಡಾಟ್ ಕಾಂ

ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ರತನ್ ಟಾಟಾ ಅವರಿಗೆ ನುಡಿ ನಮನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಇನ್ನೋವೇಶನ್ ಮತ್ತು ಎಂಟ್ರಪ್ರಿನಿಯರ್‌ಶಿಪ್ ಡೆವಲಪ್ಮೆಂಟ್ ಸೆಲ್ ಆಶ್ರಯದಲ್ಲಿ, ಭಾರತ ಕಂಡ ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.     

ಪ್ರಥಮ ಬಿ.ಕಾಂ. ವಿದ್ಯಾರ್ಥಿ ಕೃಷ್ಣ ಅವರು ರಚಿಸಿದ ಟಾಟ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳೇ ಪುಷ್ಪ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಮಾತನಾಡಿ, ಟಾಟಾ ಅವರ ಮೌಲ್ಯಯುತ ಜೀವನ ಯುವ ಪೀಳಿಗೆಗೆ ದೇಶ ಕಟ್ಟುವಲ್ಲಿ ಮಾದರಿಯಾಗಲಿ ಎಂದರು.

ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಆಶಯ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಯಶವಂತ್ ಸ್ವಾಗತಿಸಿ, ಜ್ಯೋತಿಕಾ ವಂದಿಸಿ, ಚಂದನ ನಿರೂಪಿಸಿದರು.

ರತನ್ ಟಾಟಾರವರ ಜೀವನ ಹಾಗೂ ನಡೆದು ಬಂದ ಹಾದಿಯನ್ನು ನಿದರ್ಶಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಸ್ತುತಿ ಪಡಿಸಿದ ರೂಪಕ, ಮುಖಾಭಿನಯ, ಸಾಕ್ಷ್ಯ ಚಿತ್ರ ಪ್ರದರ್ಶನ, ಟಾಟಾ ಅವರ ವರ್ಣ ಚಿತ್ರಗಳು, ಸ್ವಯಂ ಪ್ರೇರಿತರಾಗಿ ನೆರೆದ ಐದು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರ ಗಮನ ಸೆಳೆಯಿತು.   

Exit mobile version