ಭಾರತೀಯ ಸಂಸ್ಕೃತಿಯ ಉಳಿವು ಬೆಳವಣಿಗೆಗೆ ಭರತನಾಟ್ಯದ ಕೊಡುಗೆ ಅಪಾರ : ಡಾ|| ಎಚ್. ರಾಮಮೋಹನ್
ಕುಂದಾಪುರ: ಭಾವ ರಾಗ ತಾಳ ಮೂರು ಮೇಳ್ಯೆಸಿರುವ ಅದ್ಭುತ ನೃತ್ಯ ಕಲೆಗೆ ಜಗತ್ತಿನಾದ್ಯಂತ ಮನ್ನಣೆ ದೊರೆತಿದೆ. ಮೈಮನಗಳಿಗೆ ರೋಮಾಂಚನ ಮೂಡಿಸಿ ಕಲೆಯ ರಸ ಸ್ವಾದವನ್ನು ಆಸ್ವಾದಿಸುವಂತ ಭರತನಾಟ್ಯವು ಭಾರತೀಯ ಸಂಸ್ಕೃತಿಯ ಉಳಿವಿಗೆ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ಬ್ಯಾಂಕ್ನ ನಿರ್ದೇಶಕರಾದ ಡಾ|| ಎಚ್. ರಾಮಮೋಹನ್ ಹೇಳಿದರು.
ಅವರು ನೃತ್ಯವಸಂತ ನಾಟ್ಯಾಲಯ (ರಿ.) ಕುಂದಾಪುರದ ದಶಮಾನೋತ್ಸವದ ಅಂಗವಾಗಿ ಹಂಗಳೂರಿನ ಅನಂತ ಪದ್ಮನಾಭ ಸಭಾಗೃಹದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ ದಶಾರ್ಪಣಂ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಉದ್ಯಮಿ ಬಿಜೂರು ರಾಮಕೃಷ್ಣ ಶೇರಿಗಾರ್ ಬಹುಮಾನ ವಿತರಿಸಿ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೊಜಿಸಿ ಯಶಸ್ವಿಯಾಗಿ ನಡೆಸಿದ ಸಂಘಟಕರನ್ನು ಪ್ರಶಂಸಿಸಿದರು.
ಸೀನಿಯರ್ ವಿಭಾಗದಲ್ಲಿ ದಿವ್ಯ ಬಿ.ಕೆ. ಮಂಗಳೂರು ಪ್ರಥಮ, ಶರಣ್ಯ ಬಿ. ಮಂಗಳೂರು ದ್ವಿತೀಯ, ಧೀಮಹಿ ಉಡುಪಿ ತೃತೀಯ ಸ್ಥಾನ ಪಡೆದರೇ ಜ್ಯೂನಿಯರ್ ವಿಭಾಗದಲ್ಲಿ ತ್ವಿಷಾ ಆರ್. ಶೆಟ್ಟಿ ಮಂಗಳೂರು ಪ್ರಥಮ, ಚೈತನ್ಯ ಉಡುಪಿ ದ್ವಿತೀಯ, ಸಿಂಚನ ಕೆ. ಪುತ್ತೂರು ತೃತೀಯ ಸ್ಥಾನ ಪಡೆದರು. ಸಬ್ ಜ್ಯೂನಿಯರ್ ವಿಭಾಗದಲ್ಲಿ ಪೂರ್ವಿಕೃಷ್ಣಾ ಮಂಗಳೂರು ಪ್ರಥಮ, ರೆಮ್ಹೊನಾ ಇವೆಟ್ಟಾ ಮಂಗಳೂರು ದ್ವಿತೀಯ, ದಿಶಾ ಯು. ಬೆಂಗಳೂರು ತೃತೀಯ ಸ್ಥಾನ ಗಳಿಸಿದರು.
ನೃತ್ಯ ವಸಂತ ನಾಟ್ಯಾಲಯ (ರಿ.) ಕುಂದಾಪುರದ ನೃತ್ಯಗುರು ಪ್ರವಿತಾ ಅಶೋಕ್, ತೀರ್ಪುಗಾರರಾದ ರಾಧಿಕ ಶೆಟ್ಟಿ ಮಂಗಳೂರು, ಅಪರ್ಣಾ ಶರ್ಮ ಮಣಿಪಾಲ, ಮಂಜುಳ ಸುಬ್ರಹ್ಮಣ್ಯ ಪುತ್ತೂರು ಇನ್ನಿತರರು ಉಪಸ್ಥಿತರಿದ್ದರು. ನೃತ್ಯ ವಸಂತ ನಾಟ್ಯಾಲಯ (ರಿ.) ನಿರ್ದೇಶಕಿ ಚಂದ್ರಿಕ ಧನ್ಯ ಸ್ವಾಗತಿಸಿದರು. ಸತ್ಯಶ್ರೀ ಗೌತಮ್ ಕಾರ್ಯಕ್ರಮ ನಿರ್ವಹಿಸಿದರು. ವಾಣಿಶ್ರೀ ಭಟ್ ವಂದಿಸಿದರು.ಚಿನ್ಮಯಿ ಧನ್ಯ, ಕಲ್ಪನಾ ಭಾಸ್ಕರ್ ಸಹಕರಿಸಿದರು.
ಉದ್ಘಾಟನೆ: ನೃತ್ಯವಸಂತ ನಾಟ್ಯಾಲಯ (ರಿ.) ಕುಂದಾಪುರದ ದಶಮಾನೋತ್ಸವದ ಅಂಗವಾಗಿ ಹಂಗಳೂರಿನ ಅನಂತ ಪದ್ಮನಾಭ ಸಭಾಗೃಹದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ ದಶಾರ್ಪಣಂನ ಉದ್ಘಾಟನೆಯನ್ನು ಕೋಟ ಪಡುಕೆರೆಯ ಗೀತಾನಂದ ಫೌಂಡೇಶನ್ನ ಪ್ರವರ್ತಕ ಆನಂದ ಸಿ. ಕುಂದರ್ ನೆರವೇರಿಸಿದರು. ಶೃಂಗೇರಿ ಶಾರದ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ|| ಎಚ್. ವಿ. ನರಸಿಂಹ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಇಬ್ರಾಹಿಂ ಸಾಹೇಬ್ ಹಂಗಾರ್ಕಟ್ಟೆ ಇನ್ನಿತರರು ಉಪಸ್ಥಿತರಿದ್ದರು.